ಹಾವೇರಿ: ಸಿದ್ದರಾಮಯ್ಯ ಹೇಳಿದ ತಕ್ಷಣ ವೇದಾಂತ ಏನಲ್ಲ. ಹಿಂದೆ ಮೇಟಿಯವರ ಕೇಸ್ ನಲ್ಲಿ ಮಹಿಳೆ ಬಂದು ಹೇಳಿಕೆ ಕೊಟ್ಟರೂ ಎಫ್ಐಆರ್ ಆಗಿರಲಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಎಸ್ಐಟಿ ತನಿಖೆಗೆ ಸೂಚನೆ ಕೊಟ್ಟಿದೆ. ಸಂತ್ರಸ್ತೆ ಸಹ ಪ್ರಕರಣ ದಾಖಲಿಸಿದ್ದಾರೆ. ಅವಶ್ಯಕತೆ ಕಂಡುಬಂದರೆ, ತನಿಖೆಯಲ್ಲಿ ರಮೇಶ್ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದರೆ ಖಂಡಿತ ಬಂಧಿಸುತ್ತಾರೆ ಎಂದರು.
ಚಿತ್ರರಂಗಕ್ಕೆ ಕೊರೊನಾ ನಿಯಮದಲ್ಲಿ ಸಡಿಲಿಕೆ ಕೊಟ್ಟಿರುವುದನ್ನು ಸಮರ್ಥಿಸಿಕೊಂಡ ಸಚಿವರು, ಚಿತ್ರರಂಗಕ್ಕೆ ಸಡಿಲಿಕೆ ಅವಶ್ಯ ಇದೆ. ಎಲ್ಲರೂ ಮಾಸ್ಕ್ ಧರಿಸಬೇಕೆಂದು ಸೂಚನೆ ಕೊಟ್ಟಿದ್ದಾರೆ. ಕಳೆದ ವರ್ಷದಂತೆ ಈ ವರ್ಷವೂ ಜನ ಕೊರೊನಾ ನಿಯಮಗಳನ್ನು ನಿರ್ಲಕ್ಷಿಸುತ್ತಿದ್ದಾರೆ. ಜನರ ಜವಾಬ್ದಾರಿ ಬಹಳಷ್ಟಿದೆ. ಈಗ ಒಂದು ವಾರದ ಮಟ್ಟಿಗೆ ಸಿನಿಮಾ ಮಂದಿರಗಳಲ್ಲಿ ಶೇ.100 ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಜನರೂ ಈ ಬಗ್ಗೆ ಜಾಗೃತರಾಗಿರಬೇಕು ಎಂದರು.
ಉಪಚುನಾವಣೆ ವೇಳೆ ಬಿಜೆಪಿ ನಾಯಕರ ಮನಸ್ತಾಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮನೆಯೊಳಗೆ ಸಣ್ಣಪುಟ್ಟ ವ್ಯತ್ಯಾಸಗಳಿರುತ್ತವೆ. ವರಿಷ್ಠರು ಇದನ್ನು ಸರಿಪಡಿಸುವ ಕೆಲಸ ಮಾಡುತ್ತಾರೆ. ಎಲ್ಲ ಪಕ್ಷದಲ್ಲೂ ಸಣ್ಣ, ಪುಟ್ಟ ಭಿನ್ನಾಭಿಪ್ರಾಯ ಇರುತ್ತವೆ ಎಂದರು.
ವಿಜಯೇಂದ್ರ ದೇವ ಲೋಕದಿಂದ ಬಂದಿದ್ದಾರಾ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ರಾಜ್ಯ ಬಿಜೆಪಿಯ ಉಪಾಧ್ಯಕ್ಷರು. ಕಾಮಾಲೆ ಕಣ್ಣಿನವರಿಗೆ ಲೋಕವೆಲ್ಲ ಹಳದಿ ಕಾಣುತ್ತದೆ. ಹಾಗೇ ಕಾಂಗ್ರೆಸ್ ನವರಿಗೆ ವಿಜಯೇಂದ್ರ ನೋಡಿದಾಕ್ಷಣ ಬೇರೆ ರೀತಿ ಕಾಣುತ್ತಿದೆ. ವಿಜಯೇಂದ್ರ ಯುವನಾಯಕರು, ಚಾಣಾಕ್ಷರಿದ್ದಾರೆ. ಮಸ್ಕಿ, ಬಸವಕಲ್ಯಾಣ, ಬೆಳಗಾವಿ ಚುನಾವಣೆಯಲ್ಲೂ ಅವರು ಪ್ರಭಾವವನ್ನು ತೋರಿಸುತ್ತಾರೆ. ಕ್ಷುಲ್ಲಕ ವಿಚಾರಗಳಿಗೆ ವಿಜಯೇಂದ್ರರನ್ನು ಟೀಕೆ ಮಾಡುವುದು ಸರಿಯಲ್ಲ ಎಂದರು.