ಮಡಿಕೇರಿ: ಶಾಸಕ ರಮೇಶ್ ಜಾರಕಿಹೊಳಿ ಅವರ ಮೇಲಿರುವ ಆರೋಪಗಳೆಲ್ಲಾ ಆದಷ್ಟು ಬೇಗ ಆರೋಪ ಮುಕ್ತವಾಗಿ ಅವರು ಸದ್ಯದಲ್ಲೇ ಸಚಿವರಾಗುತ್ತಾರೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಮಡಿಕೇರಿಯಲ್ಲಿ ಹೇಳಿಕೆ ನೀಡಿದ್ದಾರೆ.
ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸಿದ್ದ ಸಂದರ್ಭ ಮಧ್ಯಮಗಳೊಂದಿಗೆ ಮಾತನಾಡಿದ ನಾರಾಯಣಗೌಡ, ನನ್ನನ್ನು ರಾಜಕೀಯವಾಗಿ ಮುಗಿಸುವುದಕ್ಕಾಗಿ ಕಾಂಗ್ರೆಸ್ ಪಕ್ಷದವರೊಂದಿಗೆ ನಮ್ಮದೇ ಪಕ್ಷದ ಕೆಲವರು ಸೇರಿ ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅಂತಹ ಯಾವುದೇ ಅಂಶಗಳು ನನ್ನ ಗಮನಕ್ಕೆ ಬಂದಿಲ್ಲ ಎಂದರು.
ಕೆಳ ದಿನಗಳಲ್ಲಿ ಮತ್ತೆ ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಸಿಗಲಿದೆ. ಅವರೊಂದಿಗೆ ಶಾಸಕ ಮುನಿರತ್ನ ಅವರಿಗೂ ಸಚಿವ ಸ್ಥಾನ ಸಿಗಲಿದೆ ಎಂದು ಭರವಸೆ ನೀಡಿದರು. ಬಳಿಕ ಯಡಿಯೂರಪ್ಪ ಅವರು ವಿವಿಧ ಕಾಮಗಾರಿಗಳಲ್ಲಿ 12.5 ಕೋಟಿ ಲಂಚ ಸ್ವೀಕರಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಬ್ರಹಾಂ ಅವರು ಎಸಿಬಿ ತನಿಖೆಗೆ ಅವಕಾಶ ನೀಡುವಂತೆ ಕೋರ್ಟಿಗೆ ಹೋಗಿರುವ ವಿಷಯಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪನವರು ಈಗಲ್ಲ, ಹಿಂದಿನಿಂದಲೂ ನನಗೆ ಚೆನ್ನಾಗಿ ಗೊತ್ತು. ಅವರು ನಾವು ಒಂದೇ ಊರಿನವರು. ಅವರು ಅಂತಹ ಕೆಲಸ ಮಾಡಿರುವುದಿಲ್ಲ, ಮಾಡುವುದೂ ಇಲ್ಲ. ಕೋರ್ಟ್ಗೆ ಹೋದವರಿಗೆ ಅದು ಗೊತ್ತಾಗುತ್ತದೆ ಎಂದು ನುಡಿದರು.