ಮಂಡ್ಯ: ಶಿವರಾತ್ರಿ ಹಬ್ಬದ ಹಿನ್ನೆಲೆ ಬಸವೇಶ್ವರ ದೇವಸ್ಥಾನಕ್ಕೆ ಜಾಗರಣೆ ಮಾಡಲು ಹೋಗುತ್ತಿದ್ದ ವೇಳೆ ಕಾಡನೆಯೊಂದು ದಾಳಿ ನಡೆಸಿದ ಪರಿಣಾಮ ವೃದ್ಧರೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಸೊಲಬದೊಡ್ಡಿ ಗ್ರಾಮದ ಬಳಿ ಜರುಗಿದೆ.
ಸೊಲಬದೊಡ್ಡಿ ಗ್ರಾಮದ ಮುನಿನಂಜಯ್ಯ(63) ಎಂಬವರು ನಿನ್ನೆ ಶಿವರಾತ್ರಿ ಹಬ್ಬದ ಹಿನ್ನೆಲೆ ಜಾಗರಣೆ ಮಾಡಲೆಂದು ಗ್ರಾಮದ ಬಸವೇಶ್ವರ ದೇವಾಲಯಕ್ಕೆ ಮನೆಯಿಂದ ತೆರಳಿದ್ದಾರೆ. ಈ ವೇಳೆ ಮಾರ್ಗ ಮಧ್ಯ ಕಾಡಾನೆಯೊಂದು ದಾಳಿ ನಡೆಸಿದೆ. ಈ ವೇಳೆ ಮುನಿನಂಜಯ್ಯ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ. ಆದರೆ ಓಡಲು ಸಾಧ್ಯವಾಗದ ಕಾರಣ ಆನೆಯ ದಾಳಿಗೆ ತುತ್ತಾಗಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಭಾಗದಲ್ಲಿ ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಪದೇ ಪದೇ ಆನೆಗಳು ದಾಳಿ ನಡೆಸುವುದು ಸಾಮಾನ್ಯ. ಕಾಡಿನಲ್ಲಿ ಆಹಾರ ಹಾಗೂ ನೀರು ಸಿಗದ ಕಾರಣ ಕಾಡಂಚಿನ ಹಳ್ಳಿಗಳಿಗೆ ಆಹಾರ ಹಾಗೂ ನೀರನ್ನು ಹುಡುಕೊಂಡು ಬರುತ್ತವೆ. ಈ ವೇಳೆ ಬೆಳೆ ನಾಶದ ಜೊತೆಗೆ ಜನರ ಮೇಲು ಆನೆಗಳು ದಾಳಿ ನಡೆಸಿತ್ತಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಇದೀಗ ಜನರು ಆಗ್ರಹಿಸಿದ್ದಾರೆ.