ಜಮ್ಮು-ಕಾಶ್ಮೀರದಲ್ಲಿ ನಾಲ್ವರು ಭಯೋತ್ಪಾದಕರ ಎನ್‍ಕೌಂಟರ್ – ಹೆದ್ದಾರಿ ಬಂದ್

Public TV
2 Min Read
jammu 2

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾ ಪ್ರದೇಶದ ಬಾನ್ ಟೋಲ್ ಪ್ಲಾಜಾ ಬಳಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್‍ಕೌಂಟರ್ ನಡೆದಿದೆ. ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಗುಂಡಿಕ್ಕಿ ಕೊಲೆಗೈದಿದೆ.

ಎನ್ ಕೌಂಟರ್ ದೃಷ್ಟಿಯಿಂದ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಮುಚ್ಚಲಾಗಿದೆ. ನಾಗ್ರೋಟಾ ಪ್ರದೇಶದಲ್ಲೂ ಭದ್ರತೆ ಬಿಗಿಗೊಳಿಸಲಾಗಿದೆ.

ಈ ಘಟನೆ ನಡೆದಿರುವ ಪ್ರದೇಶವನ್ನು ಸುತ್ತುವರಿಯಲಾಗಿದೆ. ಭದ್ರತೆಗಾಗಿ ಹೆಚ್ಚುವರಿ ಪಡೆಗಳು ಸ್ಥಳಕ್ಕೆ ತಲುಪಿವೆ. ಟೋಲ್ ಪ್ಲಾಜಾದಲ್ಲಿ ಭಯೋತ್ಪಾದಕರ ಗುಂಪನ್ನು ಅಡಗಿಸಿಟ್ಟಿದ್ದ ಟ್ರಕ್ ಅನ್ನು ಭದ್ರತಾ ಪಡೆಗಳು ತಡೆದ ನಂತರ ಎನ್ಕೌಂಟರ್ ಪ್ರಾರಂಭವಾಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತಾ ಪಡೆಗಳು ಬಾನ್ ಟೋಲ್ ಪ್ಲಾಜಾ ಬಳಿ ನಾಕಾ ಹಾಕುತ್ತಿದ್ದಂತೆ ವಾಹನಗಳ ತಪಾಸಣೆಯ ಸಮಯದಲ್ಲಿ ಭಯೋತ್ಪಾದಕರ ಗುಂಪು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿತು. ಭಯೋತ್ಪಾದಕರು ಅರಣ್ಯ ಪ್ರದೇಶದ ಕಡೆಗೆ ಓಡಿಹೋದರು. ಆಗ ಎನ್ ಕೌಂಟರ್ ಪ್ರಾರಂಭವಾಗಿದೆ.

ಇತ್ತೀಚೆಗೆ ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಿಂದ ಭಯೋತ್ಪಾದಕರ ಗುಂಪು ನುಸುಳುತ್ತಿದ್ದವು ಎಂದು ಮೂಲಗಳು ತಿಳಿಸಿವೆ. ಭಯೋತ್ಪಾದಕರು ಟ್ರಕ್ ಒಳಗೆ ಅಡಗಿಕೊಂಡು ಕಾಶ್ಮೀರ ಕಣಿವೆಯಲ್ಲಿ ಸಾಗುತ್ತಿದ್ದರು. ಆಗ ಟ್ರಕ್ ತಡೆದು ತಪಾಸಣೆ ಮಾಡುವ ಸಮಯದಲ್ಲಿ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು.

ಟ್ರಕ್ ಒಳಗೆ ಇದ್ದ ಒಟ್ಟು ಭಯೋತ್ಪಾದಕರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಟ್ರಕ್ ಒಳಗಿದ್ದ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಾನ್ ಟೋಲ್ ಪ್ಲಾಜಾ ಬಳಿ ನಡೆದ ಎನ್‍ಕೌಂಟರ್‍ನಲ್ಲಿ ಎಲ್ಲಾ 4 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ನಾಗ್ರೋಟಾದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಇದು ಎರಡನೇ ಕಾರ್ಯಾಚರಣೆಯಾಗಿದೆ. ಜನವರಿಯಲ್ಲಿ ಮೂರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಕೊಂದಿದ್ದವು. ಟ್ರಕ್ ಒಳಗೆ ಅಡಗಿಕೊಂಡು ಇದೇ ರೀತಿಯಾಗಿ ನುಸುಳಿ ಹೋಗುತ್ತಿದ್ದರು. ಇಂತಹ ಘಟನೆ ಮತ್ತೆ ಮರುಕಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *