ರಾಯಚೂರು: ಜಮೀನಿನಲ್ಲಿ ಬೃಹದಾಕಾರದ ಮೊಸಳೆ ಕಂಡು ಜನ ಬೆಚ್ಚಿಬಿದ್ದಿರುವ ಘಟನೆ ಲಿಂಗಸಗೂರು ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಗ್ರಾಮದತ್ತ ಮೊಸಳೆ ಬಂದಿದೆ. ಗೋವಿನ ಜೋಳದ ಜಮೀನಿನಲ್ಲಿ ರಾತ್ರಿ ಕಾಣಿಸಿಕೊಂಡಿದೆ. ಮುಂಜಾವಿನಲ್ಲಿ ನೀರು ಹಾಯಿಸಲು ಹೋದ ರೈತರ ಬೃಹತ್ ಗಾತ್ರದ ಮೊಸಳೆಯನ್ನು ನೋಡಿ ಹೆದರಿದ್ದಾರೆ. ಗ್ರಾಮಸ್ಥರಿಗೆ ತಕ್ಷಣ ಈ ವಿಚಾರವನ್ನು ಹೇಳಿದ್ದಾರೆ. ಗ್ರಾಮದ ಪಕ್ಕದ ಬೋಗಾಪುರ ಕೆರೆಯಿಂದ ಆಹಾರ ಅರಸಿ ಮೊಸಳೆ ಬಂದಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.
ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ಹಿಡಿದಿದ್ದು, ಸುರಕ್ಷಿತವಾಗಿ ಕೃಷ್ಣಾ ನದಿಗೆ ಬಿಟ್ಟು ಬಂದಿದ್ದಾರೆ. ಮೊಸಳೆ ಕಾಟದಿಂದ ಈಗ ರಾತ್ರಿ ವೇಳೆ ಓಡಾಡಲು ಜನ ಹೆದರಿಕೊಳ್ಳುವಂತಾಗಿದೆ. ಇತ್ತೀಚೆಗೆ ರಾಯಚೂರು ತಾಲೂಕಿನ ಯಾಪಲದಿನ್ನಿಯಲ್ಲೂ ಮೊಸಳೆ ಪ್ರತ್ಯಕ್ಷವಾಗಿತ್ತು. ಬೇಸಿಗೆ ಆರಂಭವಾದ ಹಿನ್ನೆಲೆ ಕೆರೆ, ಹಳ್ಳಗಳಿಂದ ಆಹಾರ ಹುಡುಕಿಕೊಂಡು ಮೊಸಳೆಗಳು ಹೊರಬರುತ್ತಿವೆ.