ಮಡಿಕೇರಿ: ಕೊರೊನಾ ಸೋಂಕು ತಡೆಯಲು ಲಸಿಕೆ ಬರುವವರೆಗೂ ಮಾಸ್ಕ್ ಉತ್ತಮ ಮದ್ದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ಕೊರೊನಾ ಸಂಬಂಧಿತ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದ ಸಚಿವರು, ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮಾಹಿತಿ ಪಡೆದರು. ಕೊರೊನಾ ಸೋಂಕು ಸೋಂಕು ತಡೆಯಲು ಲಸಿಕೆ ಬರುವವರೆಗೂ ಮಾಸ್ಕ್ ಉತ್ತಮ ಮದ್ದು. ಮಾಸ್ಕ್ ಧರಿಸದವರ ವಿರುದ್ದ ಕಠಿಣ ಕ್ರಮಕ್ಕೆ ಈಗಾಗಲೇ ಸರ್ಕಾರ ನಿರ್ಧಾರ ಕೈಯಿಗೊಂಡಿದೆ. ಮಾಸ್ಕ್ ಧರಿಸದವರಿಗೆ ದಂಡದ ಶುಲ್ಕ ಈಗಾಗಲೇ ವಿಧಿಸಲಾಗುತ್ತಿದೆ. ಪೊಲೀಸರು ಮಾಸ್ಕ್ ಧರಿಸದವರಿಗೆ ದಂಡ ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜನರ ಸಹಕಾರ ಅಗತ್ಯ. ಜನ ಸಹಕರಿಸದೇ ಹೋದರೆ ಸೋಂಕು ತಡೆ ಖಂಡಿತಾ ಅಸಾಧ್ಯ ಎಂದು ಡಾ.ಸುಧಾಕರ್ ಅವರು ತಮ್ಮ ಅನಿಸಿಕೆಯನ್ನು ಅಧಿಕಾರಿಗಳೊಂದಿಗೆ ಹಂಚಿಕೊಂಡರು. ಅಲ್ಲದೇ ಕೊಡಗಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವುದು ಕಳವಳಕಾರಿ ವಿಷಯವಾಗಿದೆ. ಪಾಸಿಟಿವ್ ಪ್ರಕರಣ ಕೊಡಗಿನಲ್ಲಿ ಶೇ.16.01ಇದೆ. ಪರೀಕ್ಷೆಯ ಗುರಿ ಶೇ.67 ಸಾಧಿಸಲಾಗಿದ್ದು, ಇನ್ನೂ ಶೇ.33 ರಷ್ಟು ಸಾಧನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಸಿಎಂ ಬಿಎಸ್ವೈ ಅವರು ಕೋವಿಡ್-19 ನಿಯಂತ್ರಿಸುವ ಜವಾಬ್ದಾರಿಯನ್ನು ನೀಡಿದ್ದಾರೆ. ಲಾಕ್ಡೌನ್ ಸಂದರ್ಭ ಕೊಡಗು ಹಸಿರು ವಲಯದಲ್ಲಿತ್ತು. ಅನ್ಲಾಕ್ ನಂತರ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೆ ಕೋವಿಡ್-19 ಸಾವಿನ ಪ್ರಕರಣಗಳು ಸಹ ಹೆಚ್ಚಾಗಿದೆ. ಕಳೆದ 5 ದಿನಗಳಲ್ಲಿ ಸಾವಿನ ಪ್ರಮಾಣ 2.2 ಆಗಿದೆ. 15 ದಿನಗಳಲ್ಲಿ 1.7 ಸಾವಿನ ಪ್ರಮಾಣ ಆಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು.
ಮೆಡಿಕಲ್ ಕಾಲೇಜಿನ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ಸದ್ಯದಲ್ಲೇ ನಡೆಯಲಿದೆ. ಸಾಹಸ, ಪ್ರವಾಸೋದ್ಯಮಕ್ಕೆ ಕೊಡಗು ಹೆಸರುವಾಸಿಯಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಅವರಂತಹ ಯೋಧರ ನಾಡು ಇದಾಗಿದೆ. ಕಳೆದ ಬಾರಿಯಲ್ಲಿ ಪ್ರಾಕೃತಿಕ ವಿಕೋಪಗಳಾಗಿದ್ದನ್ನು ನಾವು ಕಂಡಿದ್ದೇವೆ. ಈ ಬಾರಿ ಪ್ರಾಕೃತಿಕ ವಿಕೋಪವನ್ನು ನಿರ್ವಹಣೆಯಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತ ಮತ್ತು ಇತರೆ ಅಧಿಕಾರಿಗಳು ಉತ್ತಮ ಕಾರ್ಯ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಸರ್ಕಾರದಿಂದ ನೀಡಲ್ಪಟ್ಟ ಗುರಿಯ ಪೈಕಿ 3,766 ಜನರನ್ನು ಪರೀಕ್ಷಿಸಿದ್ದು 67% ಗುರಿ ಮುಟ್ಟಲಾಗಿದೆ. ಇಡೀ ರಾಜ್ಯದಲ್ಲಿ ಕೊಡಗು ಜಿಲ್ಲೆಯಲ್ಲಿಯೂ ಕೊವಿಡ್ ಪಾಸಿಟಿವಿಟಿ ರೇಟ್ ಹೆಚ್ಚಾಗುತ್ತಿದೆ. ನಿಯಂತ್ರಣ ಮಾಡಬೇಕಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ವೈದ್ಯಕೀಯ ಇಲಾಖೆಯ ಆಧಿಕಾರಿಗಳಿಗೆ ತಿಳಿಸಿದರು.