– ಮುಂಜಾಗ್ರತಾ ಕ್ರಮ ಕೈಗೊಳ್ಳದ ಸಿಬ್ಬಂದಿ, ಬಿಬಿಎಂಪಿ
ಬೆಂಗಳೂರು: ಮಹಾಮಾರಿ ಕೊರೊನಾದಿಂದ ಪ್ರತಿದಿನ ಒಂದೊಂದು ಅಮಾನವೀಯ ಘಟನೆ ಬೆಳಕಿಗೆ ಬರುತ್ತಿವೆ. ಇದೀಗ ಕೊರೊನಾ ಸೋಂಕಿತ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಜನರ ಮಧ್ಯೆಯೇ ಸಾಗಾಟ ಮಾಡಿರುವ ಅಮಾನವೀಯ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ರಾಮಕೃಷ್ಣ ಪಾಳ್ಯ ಲೇಔಟ್ನ ಮಾಲಗಾಳ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. 60 ವರ್ಷದ ವೃದ್ಧೆ ಕೊರೊನಾ ಸೋಂಕು ಬಂದಿದ್ದು, ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ವೃದ್ಧೆ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮನೆಯಲ್ಲೇ ನರಳಿ ನರಳಿ ಪ್ರಾಣಬಿಟ್ಟ ಸೋಂಕಿತ!
ಈ ಹಿನ್ನೆಲೆಯಲ್ಲಿ ಮೃತ ಸೋಂಕಿತ ವೃದ್ಧೆಯ ಶವವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಬೇರೆಡೆಗೆ ಸಾಗಿಸಿದ್ದಾರೆ. ಆದರೆ ಆರೋಗ್ಯ ಸಿಬ್ಬಂದಿ ವೃದ್ಧೆಯ ಶವವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿಕೊಂಡು ತೆಗೆದುಕೊಂಡು ಹೋಗಿದ್ದಾರೆ.
ಕೊರೊನಾದಿಂದ ಮೃತಪಟ್ಟವರ ಶವವನ್ನು ಬೇರೆಡೆಗೆ ಸಾಗಿಸುವಾಗ ಆ ರಸ್ತೆಯನ್ನು ಬಂದ್ ಮಾಡಬೇಕಿತ್ತು. ಯಾಕೆಂದರೆ ಜನರು ಓಡಾಟ ಮಾಡುತ್ತಿದ್ದರೆ ಅವರಿಗೆ ಸೋಂಕು ತಗಲುವ ಸಾಧ್ಯತೆ ಇರುತ್ತದೆ. ಆದರೆ ಸಿಬ್ಬಂದಿಯಾಗಲಿ, ಬಿಬಿಎಂಪಿಯಾಗಲಿ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿಲ್ಲ. ಜನರ ಮಧ್ಯೆಯೇ ಸ್ಟ್ರಕ್ಚರ್ ನಲ್ಲಿ ಅಮಾನವೀಯವಾಗಿ ತೆಗೆದುಕೊಂಡು ಹೋಗಿದ್ದಾರೆ. ಇದನ್ನೂ ಸ್ಥಳೀಯರೊಬ್ಬರು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಆರೋಗ್ಯ ಸಿಬ್ಬಂದಿ ಸೋಂಕಿತೆ ವೃದ್ಧೆ ಶವವನ್ನು ಎಲ್ಲಿಗೆ ತೆಗೆದುಕೊಂಡು ಹೋದರು, ಎಲ್ಲಿ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಆದರೆ ಬಿಬಿಎಂಪಿ ಕಣ್ಣು ಮುಚ್ಚಿ ಕುಳಿತಿದಿಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.