-ಬೆಂಗಳೂರಿಗೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ತೊಂದರೆಯಾಗ್ತಿದೆ
ಬೆಂಗಳೂರು: ಸರ್ಕಾರಕ್ಕೆ ಲಾಕ್ಡೌನ್ ಬಗ್ಗೆ ತೀರ್ಮಾನ ಮಾಡಲು ಅಧಿಕಾರವಿದೆ. ಲಾಕ್ಡೌನ್ ವಿಚಾರದಲ್ಲಿ ಕಾಂಗ್ರೆಸ್ ಮಧ್ಯಪ್ರವೇಶ ಮಾಡಲ್ಲ. ಆದರೆ ನಮಗೆ ಸಲಹೆ ನೀಡಲು ಕೇಳಿದರೇ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯದ ಜನತೆಯ ಆಂತಕಕ್ಕೆ ಸರ್ಕಾರವೇ ನೇರ ಕಾರಣ. ಮತ್ತೆ ಜನ ವಲಸೆ ಹೊರಟಿದ್ದಾರೆ. ಬಿಜೆಪಿ ನಾಯಕರಿಗೆ ಸರಿಯಾಗಿ ಆಡಳಿತ ನಡೆಸಲು ಆಗುತ್ತಿಲ್ಲ. ಜನರಿಗೆ ಸರ್ಕಾರ ಸಮಸ್ಯೆ ಬಗೆ ಹರಿಸುವ ಭರವಸೆ ನೀಡುತ್ತಿಲ್ಲ. ಬೆಂಗಳೂರಿಗೆ ಮಾತ್ರ ಅಲ್ಲ ಇಡೀ ರಾಜ್ಯಕ್ಕೆ ತೊಂದರೆಯಾಗುತ್ತಿದೆ. ರಾಜ್ಯದ ಜನತೆಯನ್ನು ನಾವೆಲ್ಲರೂ ರಕ್ಷಣೆ ಮಾಡಬೇಕಿದೆ. ಆದರೆ ಲಾಕ್ಡೌನ್ ವಿಚಾರದಲ್ಲಿ ಕಾಂಗ್ರೆಸ್ ಮಧ್ಯ ಪ್ರವೇಶ ಮಾಡಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದರು.
ಕೊರೊನಾ ಸೋಂಕನ್ನು ಪಕ್ಷಾತೀತವಾಗಿ ನಾವು ನಿಯಂತ್ರಣ ಮಾಡಬೇಕಿದೆ. ಆದರೆ ಬಿಜೆಪಿಯವರು ಅವರ ಅಜೆಂಡಾ ಮಾಡಿಕೊಂಡಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಸೇವೆ ಮಾಡಲು ಬದ್ಧರಾಗಿದ್ದಾರೆ. ಲಾಕ್ಡೌನ್ ವಿಚಾರದಲ್ಲಿ ಅಧಿಕೃತವಾಗಿ ಕರೆದು ಮಾತನಾಡಿದರೆ ನಮ್ಮ ಅಭಿಪ್ರಾಯ ಹೇಳುತ್ತೇವೆ. ಮಾಧ್ಯಮಗಳು ರಿಯಾಲಿಟಿ ಚೆಕ್ ಮಾಡಿ ಅವ್ಯವಸ್ಥೆ ತೋರಿಸುತ್ತಿವೆ. ಸರ್ಕಾರದಲ್ಲಿ ಯಾವುದೇ ಪ್ಲಾನಿಂಗ್ ಇಲ್ಲ, ಒಬ್ಬರ ಮೇಲೆ ಒಬ್ಬರಿಗೆ ನಂಬಿಕೆ ಇಲ್ಲ. ಆರೋಗ್ಯ ಮಂತ್ರಿ, ಬೆಂಗಳೂರಿಗೆ ಒಬ್ಬರು, ಸಿಎಂ ರಾಜಕೀಯ ಕಾರ್ಯದರ್ಶಿ ಕೂಡ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳ ಮೇಲೆಯೂ ನಂಬಿಕೆ ಇಲ್ಲ ಎಂದು ಟೀಕೆ ಮಾಡಿದರು.