ಚಿಕ್ಕಬಳ್ಳಾಪುರ: ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ಸಮಾಜದಲ್ಲಿ ರಾಯಭಾರಿಗಳ ರೀತಿ ಇರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ಮಿನಿವಿಧಾನಸೌಧದ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಸುಧಾಕರ್ ಮಾತನಾಡಿದರು. ಇದೇ ವೇಳೆ ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಸಿಸಿಬಿಯಿಂದ ಸ್ಯಾಂಡಲ್ವುಡ್ ನಟಿ ರಾಗಿಣಿ ಮನೆ ಮೇಲೆ ದಾಳಿ ನಡೆಸಿ ವಶಕ್ಕೆ ಪಡೆದ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನಾನು ವೈಯಕ್ತಿಕವಾಗಿ ಯಾರ ಬಗ್ಗೆಯೂ ಮಾತನಾಡಲ್ಲ. ಜನಪ್ರತಿನಿಧಿಗಳು ಹಾಗೂ ನಟ-ನಟಿಯರು ಸಮಾಜದಲ್ಲಿ ರಾಯಭಾರಿಗಳ ತರ ಇರಬೇಕು ಎಂದರು.
ನಮ್ಮನ್ನ ನೋಡಿ ಬಹಳ ಜನ ಜೀವನದಲ್ಲಿ ಬದಲಾಗ್ತಾರೆ. ನಾವೇ ಮಾದಕ ವಸ್ತುಗಳನ್ನ ಸೇವಿಸಿ ತಪ್ಪು ಮಾಡಬಾರದು. ಇದರಿಂದ ನಾವು ತಪ್ಪು ಸಂದೇಶವನ್ನ ಜನರಿಗೆ ಕೊಡುವಂತಾಗುತ್ತೀರಿ. ಹೀಗಾಗಿ ಸಮಾಜದಲ್ಲಿ ಗಳಿಸಿದ ಹೆಸರು ಮಣ್ಣುಪಾಲಾಗುತ್ತೆ. ಈ ಕೃತ್ಯದಲ್ಲಿ ತೊಡಗಿಸಿಕೊಂಡವರಿಗೆ ಇದು ಅನ್ವಯವಾಗುತ್ತೆ ಅಂತ ಹೇಳಿದರು.
ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತೆ. ಬೇರೆ ಬೇರೆ ದೇಶಗಳಲ್ಲಿ ಇದೊಂದು ದೊಡ್ಡ ಮಾಫಿಯಾ. ಹೀಗಾಗಿ ರಾಜ್ಯದಲ್ಲಿ ಮಾದಕವಸ್ತುಗಳ ನಿಗ್ರಹಕ್ಕೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾನು ಈಗಾಗಲೇ ಈ ಬಗ್ಗೆ ಗೃಹ ಸಚಿವರ ಜೊತೆ ಮಾತನಾಡಿದ್ದು, ಸರ್ಕಾರ ಈ ಚಟುವಟಿಕೆಗೆಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದರು.