ನವದೆಹಲಿ: ತೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಮತ್ತು ಬೆವರಿನ ಬಳಕೆಯನ್ನು ಮಾಡುವುದನ್ನು ನಿಷೇಧ ಮಾಡುವಂತೆ ಅನಿಲ್ ಕುಂಬ್ಳೆ ನೇತೃತ್ವದ ಸಮಿತಿ ಐಸಿಸಿಗೆ ಶಿಫಾರಸು ಮಾಡಿದೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ಕ್ರಿಕೆಟ್ ಆಟದಲ್ಲಿ ಎಂಜಲು ಹಾಗೂ ಬೆವರನ್ನು ಚೆಂಡಿಗೆ ಸವರಿ ಹೊಳಪು ಹೆಚ್ಚಿಸುವ ಕ್ರಮವನ್ನು ನಿಷೇಧಿಸಬೇಕೆಂಬ ಚರ್ಚೆ ಹೆಚ್ಚಾಗಿತ್ತು. ಈ ಕಾರಣದಿಂದ ಐಸಿಸಿ ಕ್ರಿಕೆಟ್ ಕಮಿಟಿ ಸೂಚನೆಗಳನ್ನು ನೀಡಿದೆ. ಶೀಘ್ರವೇ ಐಸಿಸಿ ಸಮಾವೇಶ ನಡೆಯಲಿದ್ದು, ಆ ವೇಳೆ ಸಮಿತಿಯ ಸೂಚನೆಗಳನ್ನು ಚರ್ಚೆ ಮಾಡುವ ಸಾಧ್ಯತೆ ಇದೆ. ಇತ್ತ ಸೋಮವಾರ ಕುಂಬ್ಳೆ ನೇತೃತ್ವದ ಐಸಿಸಿ ಕಮಿಟ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾವೇಶ ನಡೆಸಿ, ತಾವು ತೆಗೆದುಕೊಂಡ ನಿರ್ಧಾರಗಳ ಕುರಿತು ಪ್ರಸ್ತಾಪ ಮಾಡಿದ್ದಾಗಿ ಕುಂಬ್ಳೆ ಹೇಳಿದ್ದಾರೆ.
ಸದ್ಯ ನಾವೆಲ್ಲರೂ ಅಸಾಧಾರಣ ಪರಿಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದೇವೆ. ಇದೇ ಕಾರಣದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ಆ ಮೂಲಕ ಸುರಕ್ಷಿತ ವಾತಾವರಣದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಡೆಯುತ್ತವೆ ಎಂದು ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಾಕಷ್ಟು ಬಾರಿ ಆಟಗಾರರು ಸಲೈವಾ (ಎಂಜಲು) ಬಳಕೆ ಮಾಡುವುದನ್ನು ನಿಷೇಧ ಮಾಡುಬೇಕು ಎಂಬ ಚರ್ಚೆ ಸಾಕಷ್ಟು ಬಾರಿ ಚರ್ಚೆಯಾಗಿತ್ತು. ಆದರೆ ಈ ಬಾರಿ ಐಸಿಸಿ ಕಮಿಟಿ ನೀಡಿರುವ ಶಿಫಾರಸುಗಳಿಗೆ ಅಂಗೀಕಾರ ಸಿಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಟೆಸ್ಟ್ ಪಂದ್ಯಗಳಲ್ಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಆಟಗಾರರು ಸಲೈವಾ ಬಳಕೆ ಮಾಡುತ್ತಾರೆ. ಉಳಿದಂತೆ ಕೊರೊನಾ ವೈರಸ್ ಕಾರಣದಿಂದ ಸ್ಥಗಿತಗೊಂಡಿದ್ದ ಆಟಗಾರರ ತರಬೇತಿ ಶಿಬಿರಗಳು ಮತ್ತೆ ಆರಂಭವಾಗುತ್ತಿವೆ.