ಮಡಿಕೇರಿ: ಬೆನ್ನಿಗೆ ಚೂರಿ ಹಾಕಿದರು ಎನ್ನೋದು ಸಿದ್ದರಾಮಯ್ಯ ಅವರಿಗೆ ಈಗ ಅರ್ಥವಾಗಿದೆ. ಬೆನ್ನಿಗೆ ಚೂರಿ ಹಾಕುತ್ತಾರೆ ಎನ್ನೋ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇನ್ನೂ ಯಾಕೆ ಇದ್ದಾರೋ ಗೊತ್ತಿಲ್ಲ. ಅವರು ಚೆನ್ನಾಗಿ ಯೋಚಿಸಿ ಮುಂದಿನ ಒಳ್ಳೆಯ ಹೆಜ್ಜೆ ಇಡಲಿ ಎಂದು ವಸತಿ ಸಚಿವ ವಿ.ಸೋಮಣ್ಣ ಕಿಚಾಯಿಸಿದರು.
ಕೊಡಗಿನ ಸುಂಟಿಕೊಪ್ಪದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸಿಎಂ ಆಗಿದ್ದವರು, ಅವರ ಪಕ್ಷವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಶ್ರಮಿಸಿದವರು. ಅಂತಹವರಿಗೇ ಅವರ ಪಕ್ಷದಲ್ಲಿ ಬೆನ್ನಿಗೆ ಚೂರಿ ಹಾಕುವುದಾದರೆ ಆ ಪಕ್ಷದಲ್ಲಿ ಯಾಕಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರ ನೋವನ್ನು ನಿನ್ನೆ ಹೇಳಿಕೊಂಡಿದ್ದಾರೆ. ಅದಕ್ಕೆ ನಾವು ಅಷ್ಟು ಬೆಲೆ ಕೋಡಬೇಕಿಲ್ಲ, ಸಿದ್ದರಾಮಯ್ಯ ಅವರು ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳು. ಅವರ ಮೇಲೆ ನನಗೆ ಅಪಾರವಾದ ಗೌರವವಿದೆ ಅವರು ಮಾತಾನಾಡಿರುವುದು ಸರಿ ಇದೆ ಎಂದರು.
ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ನಾಲ್ಕು ಬಾರಿ ಆ ಕ್ಷೇತ್ರದಲ್ಲಿ ಹಿಂದೆ ಗೆದ್ದಿದ್ದರು. ಆದರೆ ಇಂದಿಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದೀಪದ ಕೆಳಗೆ ಕತ್ತಲು ಅನ್ನೋ ಹಾಗೆ ಆ ಕಡೆ ಕೆಆರ್ಎಸ್ ಈ ಕಡೆ ಕಬಿನಿ ಇದೆ. ಆದರೂ ಕುಡಿಯುವ ನೀರಿನ ಕೊರತೆ ಇದ್ದು, ಆ ಸಮಸ್ಯೆಯನ್ನು ಸಿದ್ದರಾಮಯ್ಯ ಅವರು ಬಗೆಹರಿಸಲಿಲ್ಲ. ಈಗ ಜನರನ್ನು ದೂರಿದರೆ ಏನು ಪ್ರಯೋಜನ ಎಂದು ಟೀಕಿಸಿದರು.