ಉಡುಪಿ: ರಾಜ್ಯದ ಎರಡು ಉಪಚುನಾವಣೆಗಳಲ್ಲೂ ಬಿಜೆಪಿಗೆ ಗೆಲುವಾಗಿದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮುನಿರತ್ನ ದಾಖಲೆ ಮತಗಳ ಅಂತರದಿಂದ ವಿಜಯಿಯಾಗಿದ್ದಾರೆ. ಶಿರಾದಲ್ಲಿ ಸಹ ಮೊದಲ ಬಾರಿಗೆ ಕಮಲ ಅರಳಿದೆ. ಈ ಬಗ್ಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರಾಮನಗರದ ಶಕ್ತಿ ಕನಕಪುರದ ಬಂಡೆ ನಮಗೆ ತಡೆಯಾಗಿಲ್ಲ. ಬಿಜೆಪಿಯ ಗೆಲುವಿನ ಓಟಕ್ಕೆ ಬಂಡಿ ಅಡ್ಡಿಯಾಗಿಲ್ಲ. ಈ ಫಲಿತಾಂಶ ಬಿಜೆಪಿಗೆ ಜನರ ಆಶೀರ್ವಾದವನ್ನು ಗಟ್ಟಿಗೊಳಿಸಿದೆ. ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಿಎಂ ಯಡಿಯೂರಪ್ಪ ಅವರ ವಿಶ್ವಾಸಕ್ಕೆ ಬಲ ಬಂದಿದೆ ಎಂದು ತಿಳಿಸಿದ್ದಾರೆ.
ಜನ ಬಿಜೆಪಿ, ಯಡಿಯೂರಪ್ಪ, ಮೋದಿಯವರ ಕೆಲಸಕ್ಕೆ ಬೆಂಬಲವನ್ನು ಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಮತ್ತಷ್ಟು ಶಕ್ತಿಯುತವಾಗಿ ಕೆಲಸ ಮಾಡುತ್ತದೆ. ಆಡಳಿತದಲ್ಲಿ ಬಡವರ ಪರ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳಲು ಈ ಫಲಿತಾಂಶ ಸಹಕಾರಿಯಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.