ಬೆಂಗಳೂರು: ನಾನು ಸುಮಲತಾ ಅವರ ಜೊತೆ ಸಾಕಷ್ಟು ಕಾರ್ಯಕ್ರಮ, ಚುನಾವಣಾ ಸಂದರ್ಭದಲ್ಲಿ ಜೊತೆಗಿದ್ದೆ. ಆ ಎಲ್ಲಾ ಫೋಟೊ ಬಳಸಿ ಎಡಿಟ್ ಮಾಡಿದ್ರೆ ಗೊತ್ತಾಗಲ್ವಾ? ಯಾರು ಒಳ್ಳೆ ತಂದೆ ತಾಯಿಗೆ ಹುಟ್ಟಿರುತ್ತಾರೆ ಅವರು ಈ ರೀತಿ ಮಾಡಲ್ಲ ಎಂದು ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ತನ್ನ ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ.
ಸುಮಲತಾ ಅಂಬರೀಶ್ ಅವರ ಜೊತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಅವರ ಭತ್ತಳಿಕೆಯಲ್ಲಿರುವ ಒಂದೊಂದೆ ಮಿಸೈಲ್ ಖಾಲಿಯಾಗುತ್ತಿದೆ. ಚುನಾವಣೆಯಲ್ಲಿ ಸುಮಲತಾರಿಂದ ದೂರ ಮಾಡಲು ಪ್ರಯತ್ನಪಟ್ಟಂತೆ ಈಗಲೂ ಹಾಗೆ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ : ರಾಕ್ಲೈನ್ ವೆಂಕಟೇಶ್ ಮನೆ ಮೇಲೆ ಕಿಡಿಗೇಡಿಗಳಿಂದ ದಾಳಿ
ಚುನಾವಣಾ ಸಮಯದಲ್ಲಿ ಸುಮಲತಾ ಅವರ ಕಾಲಿಗೆ ಏಟು ಬಿದ್ದಿತ್ತು. ಹಾಗಾಗಿ ಅವರು ಕರೆದ ಕಡೆ ಹೋಗುತ್ತಿದ್ದೆ. ಅಷ್ಟಕ್ಕೆ ಈ ರೀತಿ ಚೀಪ್ ಆಗಿ ನಡೆದುಕೊಳ್ಳುವುದು ಸರಿಯಲ್ಲ. ನಾನು ಇದ್ಯಾವುದಕ್ಕೂ ಜಗ್ಗಲ್ಲ ಖಡಕ್ ಆಗಿ ಪ್ರತಿಕ್ರಿಯಿಸಿದ್ದಾರೆ
ಮಾಧ್ಯಮದವರು ಕುಮಾರಸ್ವಾಮಿ ಮತ್ತು ಸುಮಲತಾ ಇಬ್ಬರಿಗೂ ಚರ್ಚೆಗೆ ವೇದಿಕೆ ಸಿದ್ದಮಾಡಿ. ಜನರ ಎದುರೇ ಎಲ್ಲವನ್ನು ಕ್ಲಿಯರ್ ಮಾಡಿಕೊಳ್ಳಲಿ. ನಾನು ಸುಮಲತಾ ಅವರನ್ನು ಕರೆ ತರುತ್ತೇನೆ. ನಾವು ಚರ್ಚೆಗೆ ಸಿದ್ದ ಎಂದು ಸವಾಲು ಎಸೆದರು.
ನಾನು ಈ ಹಿಂದೆ ಪಾರ್ವತಮ್ಮ ರಾಜಕುಮಾರ್ ಅವರ ಜೊತೆಯೂ ಇದ್ದೆ. ಸ್ವತಃ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಜೊತೆಯೂ ಇದೇ ರೀತಿ ಸೌಹರ್ದತೆಯಿಂದ ಇದ್ದೆ. ಅನಿತಾ ಕುಮಾರಸ್ವಾಮಿ ಅವರನ್ನು ಎಷ್ಟೋ ಸಾರಿ ಭೇಟಿ ಮಾಡಿದ್ದೇನೆ. ಕೈ ಹಿಡಿದು ನಾನೇ ಎಷ್ಟೋ ಬಾರಿ ಕೂರಿಸಿದ್ದೇನೆ. ಕೂರಿಸಿದ್ದೇನೆ ಎಂಬ ಮಾತ್ರಕ್ಕೆ ಈ ರೀತಿಯ ಏನೇನೋ ಕತೆ ಕಟ್ಟುವುದು ಸರಿಯಲ್ಲ ಎಂದರು.