– ಭಾರತದ ವ್ಯಾಕ್ಸಿನ್ ಬಗ್ಗೆ ತಾತ್ಸಾರ ಯಾಕೆ?
ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ರಾಜ್ಯಕ್ಕೆ ತಲುಪಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಸ್ವಾಗತ ಮಾಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ದುರ್ದೈವ. ನಮ್ಮ ದೇಶದಲ್ಲಿ ತಯಾರಾದ ಔಷಧಿಯ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಷಡ್ಯಂತ್ರ ಎಂದರು.
ಕೆಲ ಪಕ್ಷಗಳು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ದುರ್ದೈವ. ತಾವು ಮಾಡೋದಿಲ್ಲ, ಮಾಡುವವರಿಗೂ ಬಿಡುವುದಿಲ್ಲ ಎಂಬ ಮನಸ್ಥಿತಿ ಬದಲಾಯಿಸಿಕೊಳ್ಳಿ. ಹೀಗೆ ಮಾಡುವ ಪಕ್ಷವನ್ನು ಜನ ದೇಶದ ರಾಜಕಾರಣದಿಂದ ಅಳಿಸಿ ಹಾಕುತ್ತಾರೆ ಎಂದು ವಿಪಕ್ಷಗಳ ವಿರುದ್ಧ ಕಿಡಿಕಾರಿದರು.
ಇಟಲಿ ಅಥವಾ ಚೀನಾದಿಂದ ಬಂದರೆ ಮಾತ್ರ ಒಳ್ಳೆದು ಅಂತಾರೆ, ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ನಮ್ಮ ದೇಶದಲ್ಲಿ ತಯಾರಾದ ಲಸಿಕೆಯ ಬಗ್ಗೆ ಅವರಿಗೆ ನಂಬಿಕೆ ಇಲ್ಲ. ಆದರೆ ಈ ದೇಶದ ಜನರ ಓಟು ಬೇಕು. ನಮ್ಮ ದೇಶದ ವಿಜ್ಞಾನಿಗಳ ಬಗ್ಗೆಯೂ ಅವರಿಗೆ ಗೌರವ ಇದ್ದಂತಿಲ್ಲ ಎಂದು ಚಾಟಿ ಬೀಸಿದರು.
ಇದೇ ಸಂದರ್ಭದಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿ, ನನಗಿರೋ ಮಾಹಿತಿ ಪ್ರಕಾರ ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ. ಅಧಿಕೃತವಾಗಿ ಮುಖ್ಯಮಂತ್ರಿಗಳು ಇನ್ನಷ್ಟೇ ಹೇಳಬೇಕು. ಯೋಗ್ಯತೆ ಇರುವವರು ನಮ್ಮ ಪಕ್ಷದಲ್ಲಿ ಬಹಳ ಜನ ಇದ್ದಾರೆ. ಆದರೆ ಮಂತ್ರಿಯಾಗುವ ಯೋಗ ಯಾರಿಗಿದೆ ನಾಳೆ ನೋಡೋಣ ಎಂದರು.