ಬೆಂಗಳೂರು: ಸ್ಯಾಂಡಲ್ವುಡ್ ಚಿರಂಜೀವಿ ಸರ್ಜಾ ಅವರು ಸಾವಿನ ಸುದ್ದಿ ಕೇಳಿ ನಿಜಕ್ಕೂ ತುಂಬಾ ಆಘಾತವಾಯಿತು ಎಂದು ನಿರ್ದೇಶಕ ಅನುಪ್ ಭಂಡಾರಿ ಕಂಬನಿ ಮಿಡಿದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಪ್ ಭಂಡಾರಿ, ನನಗೆ ಸಾವಿನ ಸುದ್ದಿ ಈಗ ಗೊತ್ತಾಯಿತು. ಇದರಿಂದ ನನಗೆ ಶಾಕ್ ಆಗಿದೆ. ಚಿರಂಜೀವಿ ಅವರು ನನಗೆ ಪರಿಯಚವಿರಲಿಲ್ಲ. ಆದರೆ ನನ್ನ ‘ರಂಗಿತರಂಗ’ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಅವರೇ ಫೋನ್ ಮಾಡಿದ್ದರು. ಆಗ ಚೆನ್ನಾಗಿ ಮಾಡಿದ್ದೀರ ಎಂದು ವಿಶ್ ಮಾಡಿದ್ದರು ಎಂದು ನೋವಿನಿಂದ ಹೇಳಿದರು.
ಮೊದಲ ಸಲ ಫೋನ್ ಮಾಡಿದಾಗ ನಾನು ಚಿರಂಜೀವಿ ಸರ್ಜಾ ಎಂದು ಕರೆದೆ. ಆಗ ಅವರು ನನ್ನನ್ನು ಚಿರು ಎಂದು ಕರೆಯಿರಿ ಎಂದಿದ್ದರು. ಅವರ ಆರೋಗ್ಯದ ಬಗ್ಗೆ ನನಗೆ ಗೊತ್ತಿರಲಿಲ್ಲ. ಆಗಾಗ ನನಗೆ ಫೋನ್ ಮಾಡುತ್ತಿದ್ದರು. ಜೊತೆಗೆ ಕೆಲಸ ಮಾಡೋಣ ಎಂದು ಹೇಳುತ್ತಿದ್ದರು. ಚಿರಂಜೀವಿ ಅವರು ಎಲ್ಲರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ಹೀಗಾಗಿ ಈ ಸಾವಿನ ಸುದ್ದಿ ತುಂಬಾನೇ ಶಾಕಿಂಗ್ ಆಗಿದೆ ಎಂದರು.
ಈಗಲೂ ನನಗೆ ಚಿರಂಜೀವಿ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈಗ ತಾನೇ ಮದುವೆಯಾಗಿತ್ತು. ತುಂಬಾ ಬೇಸರವಾಗುತ್ತಿದೆ ಎಂದು ಅನುಪ್ ಭಂಡಾರಿ ಚಿರಂಜೀವಿ ಅಕಾಲಿಕ ಸಾವಿನ ಬಗ್ಗೆ ಸಂತಾಪ ಸೂಚಿಸಿದರು.