– ಬದುಕು ಕಟ್ಟಿಕೊಳ್ಳಲು ಹೊರಟವರು ಮಾರ್ಗದಲ್ಲೇ ಸಾವು
ಚಿತ್ರದುರ್ಗ: ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಬಿ.ಜಿ.ಕೆರೆ ಗ್ರಾಮದ ಬಳಿ ಬಸ್ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 5ಕ್ಕೇರಿಕೆಯಾಗಿದೆ. ಆರು ಜನರ ಸ್ಥಿತಿ ಗಂಭೀರವಾಗಿದೆ. ಮೃತರೆಲ್ಲರೂ ರಾಯಚೂರು ದೇವದುರ್ಗ ತಾಲೂಕಿನವರು ಎಂದು ತಿಳಿದು ಬಂದಿದೆ.
ದೇವದುರ್ಗ ತಾಲೂಕಿನ ತಿಮ್ಮಣ್ಣ (40), ರತ್ನಮ್ಮ (38), ಗಜಲಿ ಗ್ರಾಮದ ಮಹೇಶ್ (16), ಸೋಮನಮರಡಿ ದುರುಗಪ್ಪ ಮತ್ತು 55 ವರ್ಷದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತದೇಹಗಳನ್ನು ಮೊಳಕಾಲ್ಮೂರು ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಗಾಯಾಳುಗಳಿಗೆ ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರು ಕ್ರೂಸರ್ ನಲ್ಲಿ ರಾಯಚೂರಿನ ಲಿಂಗಸಗೂರಿನಿಂದ ಬೆಂಗಳೂರಿನತ್ತ ಹೊರಟಿದ್ದರು. ಬೆಳಗಿನ ಜಾವ ಮೂರು ಗಂಟೆಗೆ ರಾಯಚೂರಿನತ್ತ ಹೊರಟಿದ್ದ ಬಸ್ ಮತ್ತು ಕ್ರೂಸರ್ ಮುಖಾಮುಖಿ ಡಿಕ್ಕಿಯಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಕ್ರೂಸರ್ ರಸ್ತೆ ಬದಿ ಸ್ಥಳಾಂತರಿಸಿ ವಾಹನಗಳ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.