ಚಿತ್ರದುರ್ಗ/ಚಾಮರಾಜನಗರ: ರಾಜ್ಯದಲ್ಲಿ ಕೊರೊನಾ ತನ್ನ ಆರ್ಭಟ ಮುಂದುವರಿಸಿದೆ. ಸೋಂಕಿನ ಸ್ಫೋಟಕ್ಕೆ ಬೆಚ್ಚಿಬಿದ್ದಿರುವ ಜನ ಸರ್ಕಾರಕ್ಕೆ ಕಾಯದೇ ತಾವೇ ಸ್ವಯಂ ಲಾಕ್ಡೌನ್ಗೆ ಮುಂದಾಗಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಕೊರೊನಾ ಹೆಚ್ಚಿರುವ ಬೆಂಗಳೂರಿನ ಸಂಪರ್ಕದಿಂದಲೇ ಚಿತ್ರದುರ್ಗದಲ್ಲಿ ಸೋಂಕು ವ್ಯಾಪಕವಾಗಿ ಹಬ್ಬತ್ತಿದೆ. ಬೆಂಗಳೂರಿಗೆ ಹೋಗಿ ಬಂದಿದ್ದ ಹಿರಿಯೂರಿನ ವರ್ತಕನಿಂದ ವೇದಾವತಿ ನಗರ ಹಾಗೂ ಅಜಾದ್ ನಗರದಲ್ಲಿ ಸೋಂಕು ಹಬ್ಬಿದೆ. ಇದರಿಂದ ಹಿರಿಯೂರು ಪಟ್ಟಣದ ಜನರಲ್ಲಿ ಕೊರೊನಾಂತಕ ಹೆಚ್ಚಾಗಿದೆ. ಹೀಗಾಗಿ ಇಲ್ಲಿನ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮಧ್ಯಾಹ್ನಕ್ಕೆ ಸ್ವಯಂ ಘೋಷಿತವಾಗಿ ಬಂದ್ ಮಾಡುವ ಮೂಲಕ ಕೊರೊನಾ ಹರಡದಂತೆ ಎಚ್ಚೆತ್ತುಕೊಂಡಿದ್ದಾರೆ. ಇದಕ್ಕೆ ತಹಶೀಲ್ದಾರ್ ಸಾಥ್ ಕೂಡ ಸಿಕ್ಕಿದೆ.
ತಮಿಳುನಾಡು ಗಡಿ ಮುಚ್ಚಿದ ಗ್ರಾಮಸ್ಥರು:
ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೋಂಕಿನ ನಿಯಂತ್ರಣಕ್ಕೆ ಪ್ರಮುಖ ಮೂರು ನಿರ್ಣಯಗಳನ್ನು ಕೈಗೊಂಡಿದ್ದು, ಅಂತಾರಾಜ್ಯ ಪ್ರಯಾಣಿಕರಿಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಸೇರಿದಂತೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ತಮಿಳುನಾಡಿನಿಂದ ಚಾಮರಾಜನಗರಕ್ಕೆ ಬರುವ ನಾಲ್ ರೋಡ್ ಮತ್ತು ಪಾಲರ್ ರೋಡ್ ಸಂಪೂರ್ಣ ಬಂದ್ ಮಾಡಲಾಗಿದೆ.
ಕಿಲ್ಲರ್ ಕೊರೊನಾ ಸಮುದಾಯ ಸಂಪರ್ಕದ ಹಂತ ತಲುಪಿದ್ದು, ಜನರ ಆತಂಕ ದುಪ್ಪಟ್ಟಾಗಿದೆ. ಹೀಗಾಗಿ ಹಲವೆಡೆ ಸ್ವಯಂಪ್ರೇರಿತವಾಗಿ ವ್ಯಾಪಾರ, ರಸ್ತೆ, ನಗರಗಳನ್ನು ಲಾಕ್ಡೌನ್ ಮಾಡಿಕೊಳ್ಳಲಾಗುತ್ತಿದೆ.