ಚಿಕ್ಕಬಳ್ಳಾಪುರ: ಕೊರೊನಾ ಆತಂಕದಿಂದ ನಗರದ ದಿನಸಿ ವರ್ತಕರು ಸ್ವಯಂ ಲಾಕ್ಡೌನ್ಗೆ ಮೊರೆ ಹೋಗಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಇಂದಿನಿಂದ(ಜುಲೈ 1) ಪ್ರತಿದಿನ ಎರಡು ಗಂಟೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ವ್ಯಾಪಾರ ವಹಿವಾಟನ್ನ ಬಂದ್ ಮಾಡಿ ದಿನಸಿ ವರ್ತಕರೇ ಸೆಲ್ಫ್ ಲಾಕ್ಡೌನ್ ಮಾಡುತ್ತಿದ್ದಾರೆ. ಅದರಲ್ಲೂ ಚಿಕ್ಕಬಳ್ಳಾಪುರ ನಗರದಲ್ಲೇ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ವರ್ತಕರಿಗೂ ಆತಂಕ ಶುರುವಾಗಿದೆ.
ಖಾಸಗಿ ಫೈನಾನ್ಸ್ ಸಂಸ್ಥೆಯ ಪಿಗ್ಮಿ ಕಲೆಕ್ಟರ್ ಗೂ ಸೋಂಕು ದೃಢವಾಗಿದೆ. ತದನಂತರ ಅದೇ ಬ್ಯಾಂಕಿನವರಾಗಿದ್ದ ಜ್ಯುವೆಲ್ಲರಿ ಶಾಪ್ ನವರಿಗೂ ಹಾಗೂ ಹಾಲಿನ ಮಳಿಗೆ ಕಾಂಡಿಮೆಂಟ್ಸ್ ನವರಿಗೂ ಸೋಂಕು ದೃಢವಾಗಿತ್ತು. ವ್ಯಾಪಾರಸ್ಥರಿಗೂ ಸೋಂಕು ಹರಡುವ ಸಾಧ್ಯತೆ ದಟ್ಟವಾಗಿರೋದ್ರಿಂದ ದಿನಸಿ ವರ್ತಕರ ಸಂಘದಿಂದ ಈ ತೀರ್ಮಾನ ಮಾಡಲಾಗಿದೆ. ಹೀಗಾಗಿ ಪ್ರತಿದಿನ 2 ಗಂಟೆಗೆ ವ್ಯಾಪಾರ ವಹಿವಾಟು ಬಂದ್ ಆಗಲಿದೆ.
ಇನ್ನೂ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವರ್ತಕರೊಬ್ಬರು, ಬರೀ 2 ಗಂಟೆ ಅಲ್ಲ 15-20 ದಿನಗಳೇ ಅಂಗಡಿ ಬಂದ್ ಮಾಡಲು ತೀರ್ಮಾನಿಸಿದ್ದೀನಿ ಎಂದರು. ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಆತಂಕ ಜಾಸ್ತಿ ಆಗುತ್ತಿದೆ. ಎಷ್ಟೇ ಮುಂಜಾಗ್ರತೆ ಕೈಗೊಂಡರೂ ಕೊರೊನಾ ಯಾವುದೇ ರೂಪದಲ್ಲಿ ಬಂದು ವಕ್ಕರಿಸಿಕೊಳ್ಳೋ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು.