– 3 ಬಾರಿ ಸ್ಕೆಚ್ ಮಿಸ್, ನಾಲ್ಕನೇ ಬಾರಿ ಕತ್ತು ಸೀಳಿ ಹತ್ಯೆ
ಬೆಂಗಳೂರು: ಆಸ್ತಿಗಾಗಿ ಚಿಕ್ಕಪ್ಪನ ಜೊತೆಗೆ ಸೇರಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ್ ಕೊಲೆಯಾದ ತಂದೆ. ಮಾಧವ್ ಅವರ ಕಿರಿಯ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳು. ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಫೆಬ್ರವರಿ 14ರಂದು ಆರೋಪಿಗಳು ಕೊಲೆಗೈದು ಪರಾರಿಯಾಗಿದ್ದರು.
ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರುಖ್, ಆದಿಲ್ ಖಾನ್ ಹಾಗೂ ಸಲ್ಮಾನ್ ಸುಪಾರಿ ಪಡೆದು ಕೊಲೆ ಮಾಡಿದ್ದ ಆರೋಪಿಗಳು. ಆರೋಪಿಗಳನ್ನು ತಲಘಟಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಏನಿದು ಪ್ರಕರಣ?:
ಮಾಧವ್ ಹಲವು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡದ್ದರು. ಜೊತೆಗೆ 100 ಕೋಟಿ ರೂ. ಮೌಲ್ಯದ ಸಾವಿರ ಎಕರೆ ಭೂಮಿ ಖರೀದಿಸಿ ಬಳ್ಳಾರಿ ಸ್ಟೀಲ್ ಅಲೈ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ದರು. ಕೆಲ ವರ್ಷಗಳಿಂದ ಮೈನಿಂಗ್ ಬ್ಯುಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಕಂಪನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಎಂಬುವರು ಆಸ್ತಿ ಮಾರಾಟ ಮಾಡುವಂತೆ ಮಾಧವ್ಗೆ ಸೂಚಿಸಿದ್ದರು. ಅವರ ಸಲಹೆ ತಳ್ಳಿಹಾಕಿದ ಹರಿಕೃಷ್ಣ ಚಿಕ್ಕಪ್ಪನ ಜೊತೆಗೆ ಸೇರಿ ತಂದೆಯ ಮೇಲೆ 2014ರಿಂದಲೇ ಯತ್ನಿಸಿದ್ದ.
ಹರಿಕೃಷ್ಣ ತಂದೆ ಮಾಧವ್ ಅವರ ಮೇಲೆ 2014ರಲ್ಲಿ ಆ್ಯಸಿಡ್ ಅಟ್ಯಾಕ್ ಮಾಡಿಸಿದ್ದ. ಬಳಿಕ ಕೊಲೆಗೆ ಸುಪಾರಿ ನೀಡಿದ್ದ. ಸುಪಾರಿ ಕಿಲ್ಲರ್ ಗಳು ಜೆಸಿ ನಗರ, ಎಸ್.ಜೆ.ಪಾರ್ಕ್ ಪ್ರದೇಶದಲ್ಲಿ ಮಾಧವ್ ಅವರ ಮೇಲೆ ಅಟ್ಯಾಕ್ ಮಾಡಿದ್ದರು. ಆದರೆ ಅವರು ಪಾರಾಗಿದ್ದರು.
ಸತತ ಎರಡು ಪ್ರಯತ್ನಗಳು ವಿಫಲವಾಗಿದ್ದರಿಂದ 3ನೇ ಬಾರಿ ಸುಪಾರಿ ತಂಡಕ್ಕೆ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ 25 ಲಕ್ಷ ನೀಡುವುದಾಗಿ ಹೇಳಿದ್ದರು. ಹೀಗಾಗಿ ಸುಪಾರಿ ಪಡೆದ ಆರೋಪಿಗಳು ಫೆಬ್ರವರಿ 14ರಂದು ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಮಾಧವ್ ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಲಘಟಪುರ ಪೊಲೀಸರು ಬೇರೆ ರಾಜ್ಯಗಳಲ್ಲಿ ತೆಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.