ಚಿಕ್ಕಮಗಳೂರು: ಮಳೆ-ಗುಡ್ಡ ಕುಸಿತದಿಂದ ಕಾರಣದಿಂದ ಚಾರ್ಮಾಡಿ ಘಾಟಿನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಜಿಲ್ಲಾಧಿಕಾರಿಗಳು ಸದ್ಯ 24 ಗಂಟೆಗಳ ಕಾಲ ಲಘು ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ.
ಮಳೆ-ಗುಡ್ಡ ಕುಸಿತದಿಂದ ಬೆಳಗ್ಗೆ 7 ರಿಂದ ಸಂಜೆ 7 ವರೆಗೆ ಮಾತ್ರ ಚಾರ್ಮಾಡಿ ಘಾಟ್ನಲ್ಲಿ ಲಘು ವಾಹನಗಳು ಸಂಚರಿಸಲು ಅವಕಾಶವಿತ್ತು. ಇಂದಿನಿಂದ ಜಿಲ್ಲಾಡಳಿತ ರಾತ್ರಿ ಸಂಚಾರಕ್ಕೂ ಅವಕಾಶ ನೀಡಿದೆ. ಅಲ್ಲದೇ ಲಘು ವಾಹನಗಳ ಜೊತೆ ಕೆ.ಎಸ್.ಆರ್.ಟಿ.ಸಿ. ಮಿನಿ ಬಸ್ ಗಳಿಗೂ ಅವಕಾಶ ನೀಡಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಆದೇಶ ನೀಡಿದ್ದಾರೆ.
ಚಿಕ್ಕಮಗಳೂರಿಂದ ಮೂಡಿಗೆರೆ ತಾಲೂಕು ಮೂಲಕ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಮಾರ್ಗ ಇದಾಗಿದ್ದು, ಭಾರೀ ಮಳೆಗೆ ಗುಡ್ಡ ಕುಸಿತ, ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಿಷೇಧ ವಿಧಿಸಲಾಗಿತ್ತು. ಕಳೆದ ಎರಡು ದಿನಗಳ ಹಿಂದೆ ಚಿಕ್ಕಮಗಳೂರು ಪ್ರವಾಸಿ ತಾಣಗಳ ಭೇಟಿಗೆ ಪ್ರವಾಸಿಗರಿಗೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆಗೆದುಹಾಕಿತ್ತು. ಇದರ ಬೆನ್ನಲ್ಲೇ ಚಾರ್ಮಾಡಿ ಘಾಟ್ ಮಾರ್ಗದಲ್ಲಿ 24 ಗಂಟೆಗಳ ಕಾಲ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ.