– ಆರ್ಆರ್ ನಗರದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ
ಮೈಸೂರು: ತಾಯಿಯ ದರ್ಶನಕ್ಕೆ ಬಂದಾಗ್ಲೇ ಉಪಚುನವಾಣೆ ಘೋಷಣೆಯಾಗಿದೆ ಎಂದು ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿತರತ್ನ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ದರ್ಶನ ಪಡೆದ ಮುನಿರತ್ನ ಅವರಿಗೆ ಸಂಸದ ಪ್ರತಾಪ್ ಸಿಂಹ ಸಾಥ್ ನೀಡಿದರು. ಈ ವೇಳೆ ಮಾತನಾಡಿದ ಅವರು, ಒಂದು ತಿಂಗಳಿನಿಂದ ನಾನು ಕೊರೊನಾ ಪಾಸಿಟಿವ್ ಬಂದಿದ್ದ ಕಾರಣ ಮನೆಯಲ್ಲೇ ಇದ್ದೆ. ನಿನ್ನೆ ನನಗೆ ನೆಗೆಟಿವ್ ಬಂದಿದ್ದು, ಇಂದು ತಾಯಿ ದರ್ಶನಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಬೆಂಗಳೂರು ನಗರದಲ್ಲಿ ಬೇರೆ ಕ್ಷೇತ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ಕ್ಷೇತ್ರದಲ್ಲಿ ಹೊಸ ಪ್ರದೇಶಗಳಿವೆ. ಹೀಗಾಗಿ ಇಲ್ಲಿ ಓರ್ವ ಜನಪ್ರತಿನಿಧಿಯ ಅವಶ್ಯಕತೆ ಬಹಳ ಇದೆ. ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು, ನಮ್ಮ ನಾಯಕರು ಮತ್ತು ನಮ್ಮ ಮುಖ್ಯಮಂತ್ರಿಗಳಿದ್ದಾರೆ. ಆದ್ದರಿಂದ ಆಡಳಿತ ಪಕ್ಷದಲ್ಲಿ ಇದ್ದುಕೊಂಡು ನಮಗೆ ಕೆಲಸ ಮಾಡಲು ಬಹಳಷ್ಟು ಅವಕಾಶವಿದೆ ಎಂದು ಹೇಳಿದರು.
ನಮ್ಮ ಸರ್ಕಾರ ಇನ್ನೂ ಎರಡೂವರೆ ವರ್ಷದ ತನಕ ಅಧಿಕಾರದಲ್ಲಿ ಇರುತ್ತದೆ. ಈ ವೇಳೆ ಕ್ಷೇತ್ರದ ಅಭಿವೃದ್ಧಿಯನ್ನು ಮಾಡಬಹುದು. ನಾವು ಈ ಅವಕಾಶವನ್ನು ಉಪಯೋಗಿಸಿಕೊಂಡು, ಜನ ಸೇವೆ ಮಾಡಲು ಸಿದ್ಧವಿದ್ದೇವೆ. ಈ ಬಾರಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಎರಡೂವರೆ ವರ್ಷದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಹೊಣೆ ನಮ್ಮದು ಮತ್ತು ನಮ್ಮ ನಾಯಕರದ್ದು ಎಂದು ಮುನಿರತ್ನ ಭರವಸೆ ನೀಡಿದ್ದಾರೆ.
ಕಳೆದ ಒಂದು ವರ್ಷದಿಂದ ಆ ಕ್ಷೇತ್ರಕ್ಕೆ ಯಾವುದೇ ಶಾಸಕರು ಇರಲಿಲ್ಲ. ಅಲ್ಲಿಗೆ ಓರ್ವ ಆಡಳಿತ ಪಕ್ಷದ ಶಾಸಕನ ಅವಶ್ಯಕತೆ ಇದೆ. ಟಿಕೆಟ್ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಗೊಂದಲವಿದ್ದರೂ ನಮ್ಮ ವರಿಷ್ಠರು ಅದನ್ನು ಬಗೆಹರಿಸಿ ಒಂದು ಕುಟುಂಬದ ರೀತಿಯಲ್ಲಿ ಚುನಾವಣೆ ಮಾಡುತ್ತೇವೆ ಎಂದು ಮುನಿರತ್ನ ಅವರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.