ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವೈರಸ್ ರುದ್ರತಾಂಡವವಾಡುತ್ತಿದ್ದು, ದಿನೇ ದಿನೇ ಸೋಂಕಿತರ ಸಾವು ಹೆಚ್ಚಾಗುತ್ತಿದೆ. ಜೊತೆಗೆ ಸೋಂಕು ಇಲ್ಲದರ ಸಾವು ಕೂಡ ಹೆಚ್ಚಾಗುತ್ತಿದೆ. ಹೀಗಾಗಿ ಬೆಂಗಳೂರಿನ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೂ ಜನರು ಕ್ಯೂ ನಿಂತಿದ್ದಾರೆ.
ಚಾಮರಾಜಪೇಟೆಯ ಹಿಂದೂ ರುದ್ರಭೂಮಿಯಲ್ಲಿ ಶವಸಂಸ್ಕಾರಕ್ಕೆ ನೂಕು ನುಗ್ಗಲು ಉಂಟಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಮಾತ್ರವಲ್ಲ ಬೇರೆ ಬೇರೆ ಕಾಯಿಲೆಗೆ ಚಿಕಿತ್ಸೆ ಸಿಗದೇ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಮಶಾನದಲ್ಲಿ ಶವಸಂಸ್ಕಾರಕ್ಕೂ ಜನಜಂಗುಳಿ ಉಂಟಾಗಿದೆ. ಚಾಮರಾಜಪೇಟೆಯ ರುದ್ರ ಭೂಮಿಯಲ್ಲಿ ನೂರಾರು ಜನರು ತಮ್ಮ ತಮ್ಮ ಆಪ್ತರ ಶವವನ್ನು ಸುಡಲು ಕಾಯುತ್ತಿದ್ದಾರೆ.
ಕೋವಿಡ್ ರೋಗಿಗಳು ಹೊರತುಪಡಿಸಿ ಒಂದೇ ಕ್ಷಣಕ್ಕೆ ಸುಮಾರು 60 ಶವಗಳನ್ನು ಏಕಕಾಲಕ್ಕೆ ಸ್ಮಶಾನದವರು ಸುಟ್ಟು ಹಾಕಿದ್ದಾರೆ. ಆದರೆ ಇವರು ಕೊರೊನಾದಿಂದ ಮೃತಪಟ್ಟವರಲ್ಲ. ಕೊರೊನಾ ಹೊರತುಪಡಿಸಿ ಬೇರೆ ಬೇರೆ ಕಾಯಿಲೆಗೆ ಮೃತಪಟ್ಟಿದ್ದಾರೆ.
ಬೆಂಗಳೂರಲ್ಲಿ ಕೊರೊನಾ ಸಾವಿನ ಸಂಖ್ಯೆ ದಿಢೀರ್ ಹೆಚ್ಚಳವಾಗಿದೆ. ಭಾನುವಾರ ಒಂದೇ ದಿನ 16 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಕೇವಲ 5 ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಸಾವನ್ನಪ್ಪಿದ್ದಾರೆ. ಜೂನ್ 30ಕ್ಕೆ ಬೆಂಗಳೂರಲ್ಲಿ ಕೊರೊನಾಗೆ 95 ಜನರು ಮೃತಪಟ್ಟಿದ್ದರು. ಆದರೆ ಜುಲೈ 5ಕ್ಕೆ ಕೊರೊನಾಗೆ ಬೆಂಗಳೂರಲ್ಲಿ 145 ಮಂದಿ ಬಲಿಯಾಗಿದ್ದಾರೆ. ಕೇವಲ ಐದೇ ದಿನದಲ್ಲಿ ಬೆಂಗಳೂರಲ್ಲಿ 50 ಮಂದಿ ಮೃತಪಟ್ಟಿದ್ದಾರೆ.