– ಚಿರತೆ ಚಲನವಲನ ಕ್ಯಾಮೆರಾದಲ್ಲಿ ಸೆರೆ
ಚಾಮರಾಜನಗರ: ಜಿಲ್ಲೆಯ ಮಹದೇಶ್ವರ ವನ್ಯಜೀವಿಧಾಮದಲ್ಲಿ ಅಪರೂಪದ ಕಪ್ಪು ಚಿರತೆ 2ನೇ ಬಾರಿ ಕಾಣಿಸಿಕೊಂಡಿದೆ. ಅರಣ್ಯ ಇಲಾಖೆಯಿಂದ ಹುಲಿ ಗಣತಿಗಾಗಿ ಅಳವಡಿಸಿರುವ ಕ್ಯಾಮೆರಾ ಟ್ರ್ಯಾಪಿಂಗ್ನಲ್ಲಿ ಕರಿ ಚಿರತೆಯ ಛಾಯಾಚಿತ್ರಗಳು ಸೆರೆಯಾಗಿದೆ.
ಮಲೈ ಮಹದೇಶ್ವರ ವನ್ಯಜೀವಿಧಾಮದ ಪಿ.ಜಿ.ಪಾಳ್ಯ ವಲಯದಲ್ಲಿ ಈ ಕಪ್ಪು ಚಿರತೆ ಕಂಡುಬಂದಿದೆ. ಇದು ಗಂಡು ಚಿರತೆಯಾಗಿದ್ದು, ಸುಮಾರು ಆರು ವರ್ಷ ವಯಸ್ಸಿರಬಹುದೆಂದು ಅಂದಾಜಿಸಲಾಗಿದೆ. ವನ್ಯಜೀವಿಧಾಮದಲ್ಲಿ ಈ ಹಿಂದೆಯು ಕೂಡಾ ಕಪ್ಪು ಚಿರತೆ ಪತ್ತೆಯಾಗಿತ್ತು. ಇದೀಗ ಮತ್ತೆ ಕಾಣಿಸಿಕೊಂಡಿದೆ.
ಬಹುಶಃ ಬೇರೆ ಅರಣ್ಯಗಳಿಂದ ಈ ಕರಿಚಿರತೆ ಇಲ್ಲಿಗೆ ವಲಸೆ ಬಂದಿರಬಹುದು. ಇಲ್ಲಿ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು, ಚಿರತೆಗೆ ಆಹಾರಕ್ಕೆ ಬೇಕಾದ ಪ್ರಾಣಿಗಳಿಗೇನು ಕೊರತೆಯಿಲ್ಲ. ಅಲ್ಲದೆ ಕಾಡಿನ ರಕ್ಷಣಾ ಕ್ರಮಗಳು ಹೆಚ್ಚಾಗಿದ್ದು, ಸುರಕ್ಷತೆಯ ಜೊತೆಗೆ ಅದಕ್ಕೆ ಬೇಕಾದ ವಾತಾವರಣ ಇಲ್ಲಿರುವುದರಿಂದ ಚಿರತೆ ಇಲ್ಲಿಯೆ ನೆಲೆಯೂರಿರುವ ಸಾಧ್ಯತೆಗಳಿವೆ ಎಂದು ಮಲೈಮಹದೇಶ್ವರ ವನ್ಯಜೀವಿಧಾಮ ಉಪಅರಣ್ಯ ಸಂರಕ್ಷಣಾಧಿಕಾರಿ ಏಡುಕುಂಡಲು ಅವರು ಮಾಹಿತಿ ನೀಡಿದ್ದಾರೆ.