ಹುಬ್ಬಳ್ಳಿ: ಬೈಕಿನಲ್ಲಿ ಹೋಗಿ ಸಾರ್ವಜನಿಕರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಹುಬ್ಬಳ್ಳಿಯ ಸೆಟ್ಲಮೆಂಟ್ ಗಂಗಾಧರನಗರದ ಸಿದ್ಧಾರ್ಥ ಅಲಿಯಾಸ್ ಕಿರಣ್ ಗುರುನಾಥ ನವಲಗುಂದ, ಶ್ರೀನಿವಾಸ್ ಅಲಿಯಾಸ್ ಶಿನ್ಯಾ ತಿರುಪತಿ ವೀರಾಪುರ ಹಾಗೂ ಸುಧಾಕರ್ ಅಲಿಯಾಸ್ ಸುಧಾ ಸುಭಾಷ ಗಬ್ಬೂರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳು ರಾಷ್ಟ್ರೀಯ ಹೆದ್ದಾರಿ ನಾಲ್ಕರ ಛಬ್ಬಿ ಗ್ರಾಮದ ಬಳಿ ಸಾರ್ವಜನಿಕರಿಗೆ ಚಾಕು ತೋರಿಸಿ ದರೋಡೆ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದು ದಾಳಿ ಮಾಡಿದ ಹುಬ್ಬಳ್ಳಿಯ ಗ್ರಾಮೀಣ ಠಾಣೆ ಪೊಲೀಸರು ಆರೋಪಿಗಳನ್ನು ಎಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಗಳಿಂದ ಬೈಕ್, ಬೆದರಿಸಲು ಬಳಕೆ ಮಾಡುತ್ತಿದ್ದ ಏರ್ ಗನ್, ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಠಾಣೆ ಇನ್ಸಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದಲ್ಲಿ ಆರೋಪಿಗಳ ಬಂಧನವಾಗಿದ್ದು ಘಟನೆಯ ಕುರಿತು ಹುಬ್ಬಳ್ಳಿಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.