ಹುಬ್ಬಳ್ಳಿ: ಚಲಿಸುತ್ತಿದ್ದ ರೈಲಿನಿಂದ ಯುವಕನೊಬ್ಬ ಕೆಳಗೆ ಬಿದ್ದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದ ಬಳಿ ನಡೆದಿದೆ. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರೈಲಿನಿಂದ ಕೆಳಗೆ ಬಿದ್ದ ಯುವಕನನ್ನು ಮನೋಜ್ ಎಂದು ಗುರುತಿಸಲಾಗಿದ್ದು, ಯುವಕ ಉತ್ತರ ಪ್ರದೇಶದ ಮೂಲದವನಾಗಿದ್ದಾನೆ. ಕೆಳಗೆ ಬಿದ್ದ ರಭಸಕ್ಕೆ ಒಂದು ಕಾಲಿನ ಎಲುಬು ಸಂಪೂರ್ಣವಾಗಿ ಮುರಿದಿದೆ. ತೀವ್ರ ರಕ್ತಸ್ರಾವದಿಂದ ಬಿದ್ದಿದ್ದವನನ್ನು ಮೂರು ಗಂಟೆಗಳ ನಂತರ ನೋಡಿದ ಸಾರ್ವಜನಿಕರು 108 ಅಂಬುಲೆನ್ಸ್ ಗೆ ಕರೆ ಮಾಡಿ, ಮಾಹಿತಿ ನೀಡಿ ರಕ್ಷಣೆ ಮಾಡಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ 108 ಸಿಬ್ಬಂದಿ ಗಾಯಾಳು ಮನೋಜನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ರೈಲಿನಿಂದ ಆಯ ತಪ್ಪಿಬಿದ್ದನೋ ಅಥವಾ ಆತ್ಮಹತ್ಯೆಗೆ ಯತ್ನಿಸಿದನೋ ಎಂಬ ಬಗ್ಗೆ ರೇಲ್ವೆ ಪೊಲೀಸರು ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. 108 ಅಂಬುಲೆನ್ಸ್ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಮನೋಜ್ ಬದುಕುಳಿದ್ದಾನೆ.