ಕಳೆದ ವಾರ ಬಿಗ್ಬಾಸ್ ಮನೆಯ ಸದಸ್ಯರಿಗೆ ಚಂಡೇಶ್ವರ ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಿದ್ದರು. ಅದರಂತೆ ಬಜರ್ ಆದ ತಕ್ಷಣ ಪ್ಲಾಸ್ಮದಲ್ಲಿ ಬರುವ ಹೆಸರಿನ ಒಬ್ಬ ಸದಸ್ಯ ಗಾರ್ಡನ್ ಏರಿಯಾಗೆ ಹೋಗಿ, ಪೈಪ್ಲೈನ್ನಲ್ಲಿ ಬರುವ ಚೆಂಡನ್ನು ಹಿಡಿಯಬೇಕಿತ್ತು. ಆ ಚೆಂಡಿನಲ್ಲಿ ಒಂದು ಲಕ್ಷುರಿ ಐಟಂ ಹೆಸರಿದ್ದು, ಚೆಂಡನ್ನು ಸದಸ್ಯ ಹಿಡಿದರೆ ಅದರಲ್ಲಿರುವ ಐಟಂ ಮನೆಗೆ ದೊರೆಯುತ್ತದೆ. ಇಲ್ಲದಿದ್ದರೆ ಮನೆಯ ಸದಸ್ಯರು ಆ ಐಟಂನ್ನು ಕಳೆದುಕೊಳ್ಳುತ್ತಾರೆ ಎಂದು ತಿಳಿಸಿದ್ದರು.
ಅದರಂತೆ ಒಂದು ವಾರದಿಂದ ಬಜರ್ ಆಗಿದ ತಕ್ಷಣ ಮನೆಯ ಸದಸ್ಯರು ಚೆಂಡನ್ನು ಹಿಡಿಯಲು ಹಲವಾರು ಸರ್ಕಸ್ ನಡೆಸುತ್ತಿದ್ದಾರೆ. ಈ ವಾರ ಕೆಲವು ಸದಸ್ಯರು ಚೆಂಡನ್ನು ಹಿಡಿದಿದ್ದಾರೆ. ಇನ್ನೂ ಕೆಲವರು ಚೆಂಡನ್ನು ಹಿಡಿಯುವಲ್ಲಿ ವಿಫಲರಾಗಿ ಲಕ್ಷುರಿ ಐಟಂ ಕಳೆದುಕೊಂಡಿದ್ದಾರೆ. ಅಂತೆಯೇ ನಿಧಿಸುಬ್ಬಯ್ಯ ಹೆಸರು ಪ್ಲಾಸ್ಮದಲ್ಲಿ ಬರುತ್ತದೆ. ಈ ವೇಳೆ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನಿಧಿ ವೇಗವಾಗಿ ಗಾರ್ಡನ್ ಏರಿಯಾಗೆ ಓಡಿ ಹೋಗುತ್ತಾರೆ. ಎಷ್ಟೇ ವೇಗವಾಗಿ ಓಡಿದ್ರೂ ನಿಧಿ ಚೆಂಡನ್ನು ಹಿಡಿಯುವಲ್ಲಿ ವಿಫಲರಾಗುತ್ತಾರೆ.
ಹೀಗಾಗಿ ಬಿಗ್ಬಾಸ್ ನಿಧಿಗೆ ವಿಭಿನ್ನವಾದ ಶಿಕ್ಷೆಯನ್ನು ನೀಡಿದ್ದಾರೆ. ಹೌದು ಚೆಂಡನ್ನು ಹಿಡಿಯುವಲ್ಲಿ ವಿಫಲವಾದ ನಿಧಿಗೆ, ಬಿಗ್ಬಾಸ್ ಚಮಚವನ್ನು ಬಳಸಿ ಸ್ವೀಮಿಂಗ್ ಪೂಲ್ನಲ್ಲಿರುವ ನೀರನ್ನು ಕಪ್ ನಲ್ಲಿರುವ ಕಪ್ಪು ಗುರುತಿನವರೆಗೂ ತುಂಬಿಸುವಂತೆ ಶಿಕ್ಷೆ ನೀಡಿದ್ದರು. ಅದರಂತೆ ಚಮಚ ಹಿಡಿದು ಸ್ವೀಮಿಂಗ್ ಪೂಲ್ನಲ್ಲಿರುವ ನೀರನ್ನು ಕಪ್ಗೆ ತುಂಬಿಸಲು ನಿಧಿ, ನಿಂತುಕೊಂಡು, ಕುಳಿತುಕೊಂಡು ಹರಸಹಾಸ ಪಡುತ್ತಿರುತ್ತಾರೆ.
ಈ ವೇಳೆ ಮನೆಯ ಸದಸ್ಯರು ನಿಧಿಗೆ ಪ್ರೋತ್ಸಾಹಿಸುತ್ತಿದ್ದರೆ, ಮಂಜು ಮಾತ್ರ ನೀನು ನೀರು ತುಂಬಿಸಿದ ತಕ್ಷಣ ಮತ್ತೊಮ್ಮೆ ನಿನ್ನ ಹೆಸರು ಬರಬೇಕು. ಮತ್ತೆ ಚೆಂಡು ಹಿಡಿಯಲಾಗದೇ ಅಯ್ಯಯ್ಯೋ ಮತ್ತೆ ನೀರು ತಂಬಿಸಬೇಕಲ್ಲ ಎಂದು ಹೇಳಬೇಕು. ವಾರ ಪೂರ್ತಿ ಇದೇ ಟಾಸ್ಕ್ ನೀಡಬೇಕು. ಹಾಗೇನಾದರೂ ಮಾಡಿದರೆ ನಾನು ಬಹಳ ಖುಷಿ ಪಡುತ್ತೇನೆ ಎಂದು ಹಾಸ್ಯ ಮಾಡುತ್ತಾರೆ.
ಒಟ್ಟಾರೆಯಾಗಿ ಈ ಟಾಸ್ಕ್ ನೋಡಲು ಸುಲಭವಾಗಿ ಕಂಡರು, ಅದು ಬಹಳ ಕಷ್ಟ ಎಂದು ಹೇಳಬಹುದು.