ಕೊಪ್ಪಳ: ಜಿಲ್ಲೆಗೆ ಭೇಟಿ ಕೊಟ್ಟು ಹೋಗಿದ್ದ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಕೊರೊನಾ ಸೊಂಕಿತ ವ್ಯಕ್ತಿಯ ಪ್ರಕರಣದಿಂದ ಆತಂಕ್ಕಕ್ಕೊಳಗಾದ ಕೊಪ್ಪಳ ಜನತೆ ಈಗ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಕಂಪ್ಲಿ ನಿವಾಸಿಯಲ್ಲಿ ಕೊರೊನಾ ಸೋಂಕು ಧೃಡ ಪಡುತ್ತಿದಂತೆ ಆತನ ಪ್ರಥಮ ಸಂಪರ್ಕ ಹೊಂದಿದ್ದ ಕೊಪ್ಪಳ ಜಿಲ್ಲೆಯ 34 ಜನರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಜಿಲ್ಲೆಯ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಮೇ 5ರಂದು ಬೆಂಗಳೂರಿನಿಂದ ಗಂಗಾವತಿಗೆ ಆಗಮಿಸಿದ್ದ ಕಂಪ್ಲಿ ನಿವಾಸಿ ನಂತರ ಕಂಪ್ಲಿಗೆ ವಾಪಸ್ ತೆರಳಿದ್ದರು. ಕಂಪ್ಲಿಗೆ ಸೇರುತ್ತಿದಂತೆ ಅವರಿಗೆ ಕೊರೊನಾ ವೈರಸ್ ಸೋಂಕಿರುವುದು ದೃಢ ಪಟ್ಟಿದೆ ಎಂದು ವರದಿಯಾಗಿದೆ. ಹೀಗಾಗಿ ಆತನೊಂದಿಗೆ ಬಸ್ಸಿನಲ್ಲಿ ಆಗಮಿಸಿದ ಪ್ರಯಾಣಿಕರು, ಬಸ್ ಚಾಲಕ ಸೇರಿದಂತೆ ಪ್ರಥಮ ಚಿಕಿತ್ಸೇ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗಳು ಸೇರಿ, ಒಟ್ಟು 34 ಜನರನ್ನ ಕ್ವಾರಂಟೈನ್ ಮಾಡಲಾಗಿತ್ತು.
ಜಿಲ್ಲೆಯ ಜನತೆಯ ಚಿತ್ತ ಅವರ ವರದಿ ಮೇಲೆ ಇತ್ತು ಈಗ ಅವರೆಲ್ಲರ ವರದಿ ನೆಗೆಟಿವ್ ಬಂದಿದ್ದು, ಜಿಲ್ಲೆ ಮತ್ತೊಮ್ಮೆ ಕೊರೊನಾದಿಂದ ಸೇಫ್ ಆದಂತಾಗಿದೆ. ಕೊರೊನಾ ಭೀತಿಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಜಿಲ್ಲಾಧಿಕಾರಿ ಕಾರ್ಯಕ್ಕೆ ಜಿಲ್ಲೆಯ ಜನತೆ ಶಹಬ್ಬಾಶ್ ಹೇಳುತ್ತಿದ್ದಾರೆ. ಇನ್ನೂ ಜಿಲ್ಲಾಡಳಿತ ಇಲ್ಲಿವರೆಗೆ 1,268 ಜನರ ಸ್ಯಾಂಪಲ್ ಕಳಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಕೊಪ್ಪಳ ಜಿಲ್ಲೆ ಗ್ರೀನ್ ಝೋನ್ ಪಟ್ಟಿಯಲ್ಲಿ ಮುಂದುವರೆದಿದೆ.