– ಮಹಾರಾಷ್ಟ್ರದಿಂದ ಬಂದ 6 ಮಂದಿಗೆ ಕೊರೊನಾ
– ಒಂದೇ ಕುಟುಂಬದ ಮೂವರಿಗೆ ಸೋಂಕು
ರಾಯಚೂರು: ಗ್ರೀನ್ ಝೋನ್ನಲ್ಲಿದ್ದ ಜಿಲ್ಲೆ ಒಂದೇ ಬಾರಿಗೆ ಆರು ಕೊರೊನಾ ಪಾಸಿಟಿವ್ ಪ್ರಕರಣಗಳ ಮೂಲಕ ಆರೆಂಜ್ ಝೋನ್ಗೆ ಬದಲಾಗಿದೆ.
ಮಹಾರಾಷ್ಟ್ರದಿಂದ ಮೆ 12, 13 ರಂದು ಜಿಲ್ಲೆಗೆ ಬಂದ ಕೂಲಿ ಕಾರ್ಮಿಕರಲ್ಲಿ ಆರು ಜನರಿಗೆ ಕೊರೊನಾ ಸೋಂಕು ಇರುವುದು ದೃಢವಾಗಿದ್ದು, ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಅಧಿಕೃತವಾಗಿ ಹೇಳಿದ್ದಾರೆ. ಆರು ಜನರಲ್ಲಿ ಒಂದೇ ಕುಟುಂಬದ ಮೂರು ಜನರಿಗೆ ಸೋಂಕು ಪತ್ತೆಯಾಗಿದೆ.
ರಾಯಚೂರಿನ ಆಟೋನಗರ ಕಾಲೋನಿ ಮೂಲದ ಒಂದೇ ಕುಟುಂಬದ ಮೂವರಲ್ಲಿ ಪಾಸಿಟಿವ್ ಬಂದಿದೆ. ಇನ್ನೂ ದೇವದುರ್ಗದ ಸುಲ್ತಾನಪುರ ಮೂಲದ ಒಬ್ಬರು, ಮಸರಕಲ್ನ ಇಬ್ಬರಿಗೆ ಕೊರೊನಾ ವೈರಸ್ ತಗುಲಿದೆ. ಒಟ್ಟು ಮೂರು ಗಂಡು, ಮೂರು ಹೆಣ್ಣು ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸುಲ್ತಾನಪುರ ಹಾಗೂ ಆಟೋನಗರದ ನಿವಾಸಿಗಳನ್ನ ರಾಯಚೂರಿನ ಯರಮರಸ್ ಕ್ವಾರಂಟೈನ್ ಕೇಂದ್ರದಲ್ಲಿ ಹಾಗೂ ಮಸರಕಲ್ನ ಇಬ್ಬರನ್ನ ಅದೇ ಗ್ರಾಮದ ಶಾಲೆಯಲ್ಲಿ ಕೊರಂಟೈನ್ ಮಾಡಲಾಗಿತ್ತು. ರೋಗಿ 1152 ದಿಂದ 1157 ವರೆಗಿನ ಆರು ಜನರನ್ನ ಐಸೋಲೇಷನ್ ವಾರ್ಡಿಗೆ ಸ್ಥಳಾಂತರಿಸಲಾಗಿದೆ. ಜೊತೆಗೆ ಪ್ರೈಮರಿ ಹಾಗೂ ಸೆಕಂಡರಿ ಸಂಪರ್ಕದಲ್ಲಿದ್ದವರನ್ನ ಪತ್ತೆ ಹಚ್ಚಲಾಗುತ್ತಿದೆ.
ಮಹಾರಾಷ್ಟ್ರದಿಂದ ಬಂದವರನ್ನ ಕ್ವಾರಂಟೈನ್ ಮಾಡಿದ್ದರಿಂದ ಸಂಪರ್ಕದಲ್ಲಿದ್ದವರ ಮಾಹಿತಿ ಸುಲಭವಾಗಿ ಪತ್ತೆ ಹಚ್ಚಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಮೇ 31ರ ವರೆಗೆ ನಿಷೇಧಾಜ್ಞೆ ಮುಂದುವರೆಯಲಿದ್ದು, ಎರಡು ಕ್ವಾರಂಟೈನ್ ಕೇಂದ್ರಗಳು ಕಂಟೈನ್ಮೆಂಟ್ ಝೋನ್ ಆಗಿದೆ. ಸುತ್ತಲಿನ ಐದು ಕಿ.ಮೀ ಬಫರ್ ಝೋನ್ ಮಾಡಲಾಗಿದೆ. ವಿವಿಧ ರಾಜ್ಯಗಳಿಂದ ಈಗಲೂ ಗುಳೆಹೋದ ಕಾರ್ಮಿಕರು ಬರುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ.