ಗ್ರಾ.ಪಂ. ಚುನಾವಣೆಯಲ್ಲಿ ಸೋತಿದ್ದಕ್ಕೆ ಗ್ರಾಮದ ರಸ್ತೆಯನ್ನೇ ಬಂದ್ ಮಾಡಿದ

Public TV
1 Min Read
klr road

ಕೋಲಾರ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಅಭ್ಯರ್ಥಿ ತಮ್ಮ ಸೋಲಿಗೆ ಕಾರಣವಾದ ಗ್ರಾಮದ ಜನ ಓಡಾಡದಂತೆ ರಸ್ತೆಯನ್ನೇ ಬಂದ್ ಮಾಡಿದ್ದಾನೆ.

election

ಜಿಲ್ಲೆಯ ಮಾಲೂರು ತಾಲೂಕಿನ ಅಗ್ರಹಾರ ಹೊಸಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನಿನ್ನೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಇದೇ ಗ್ರಾಮದ ಗಿರಿಗೌಡ ಪತ್ನಿ ಸುನಿತಾ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ದುರದೃಷ್ಟ ಎಂಬಂತೆ ಹನ್ನೊಂದು ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಸೋಲಿಗೆ ಕಾರಣರಾದ ಗ್ರಾಮಸ್ಥರಿಗೆ ತಮ್ಮ ಜಮೀನಿನಲ್ಲಿ ಬಿಟ್ಟಿದ್ದ ದಾರಿಯನ್ನು ಬಂದ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಪತ್ನಿಗೆ ಮತ ನೀಡದ ಹಿನ್ನೆಲೆ ಬೇಸರಗೊಂಡ ಗಿರಿಗೌಡ, ಈ ರಸ್ತೆ ಕೊಟ್ಟರೂ ಪ್ರಯೋಜನ ಆಗಿಲ್ಲ ಎಂದು ರಸ್ತೆಯಲ್ಲಿ ಗುಂಡಿ ತೆಗೆದು ಸಂಚಾರ ಬಂದ್ ಮಾಡಿದ್ದಾರೆ. ಹೊಸಹಳ್ಳಿ ಗ್ರಾಮದಿಂದ ಹುಣಸೇದಿನ್ನೆ ಗ್ರಾಮಕ್ಕೆ ತೆರಳಲು ಒಂದೇ ರಸ್ತೆ ಇದ್ದು, ನಿನ್ನೆ ರಾತ್ರಿ ಈ ರಸ್ತೆಯನ್ನು ಜೆಸಿಬಿ ಮೂಲಕ ಅಗೆದು ದಾರಿಯನ್ನು ಬಂದ್ ಮಾಡಲಾಗಿದೆ.

ELECTION 3

ಮಾಹಿತಿ ಪ್ರಕಾರ ಇದು ಸರ್ಕಾರಿ ರಸ್ತೆಯಲ್ಲ. ಗಿರಿಗೌಡರಿಗೆ ಸೇರಿದ ಸರ್ವೆ ನಂಬರ್‍ನಲ್ಲಿರುವ ಭೂಮಿಯಾಗಿದ್ದು, ಅನುಕಂಪದ ಆಧಾರದ ಮೇಲೆ ರಸ್ತೆಯನ್ನು ಬಿಡಲಾಗಿತ್ತು. ಗ್ರಾಮಕ್ಕೆ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲೆಂದು ರಸ್ತೆ ಬಿಟ್ಟಿದ್ದೇವೆ. ಆದರೆ ಈ ರೋಡ್ ಬಿಟ್ಟರೂ ಜನ ನಮ್ಮನ್ನು ಸೋಲಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಹುಣಿಸೇದಿನ್ನೆ ಗ್ರಾಮಸ್ಥರು ಮಾತನಾಡಿ. ಇದು ನಮ್ಮ ಗ್ರಾಮಕ್ಕಿರುವ ಏಕೈಕ ರಸ್ತೆ, ಪಕ್ಕದ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ ಹೀಗಾಗಿ ಸರ್ಕಾರ ಹಾಗೂ ಅಧಿಕಾರಿಗಳು ಈ ರಸ್ತೆಯನ್ನು ಸರಿಪಡಿಸಿಕೊಡುವಂತೆ ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *