ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣಾ ಅಖಾಡ ದಿನಕಳೆದಂತೆ ರಂಗೇರುತ್ತಿದೆ. ಹೀಗಿರುವಾಗ ಕಲಾವಿದರೊಬ್ಬರು ಜೋಳಿಗೆ ಹಿಡಿದು ತಂಬೂರಿ ಪದಗಳನ್ನು ಹಾಡುತ್ತಾ ಮತ ಭಿಕ್ಷೆ ಕೇಳುತ್ತಿರುವ ದೃಶ್ಯ ಚಾಮರಾಜನಗರ ತಾಲೂಕಿನ ದೊಡ್ಡಮೋಳೆ ಗ್ರಾಮದಲ್ಲಿ ಕಂಡು ಬಂದಿದೆ.
ಚಾಮರಾಜನಗರ ತಾಲೂಕಿನ ದೊಡ್ಡಮೊಳೆ ಗ್ರಾಮದ ಪಿ.ಸಿದ್ದಶೆಟ್ಟಿ ಅವರು ತಂಬೂರಿ ಕಲಾವಿದರಾಗಿದ್ದಾರೆ. ಇವರು ಗ್ರಾಮದ ಒಂದನೇ ಬ್ಲಾಕ್ನ ಸಾಮಾನ್ಯ ಕ್ಷೇತ್ರದಿಂದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ವಿಭಿನ್ನವಾಗಿ ಮತ ಭೇಟೆ ಮಾಡುತ್ತಿರುವ ಪಿ. ಸಿದ್ದಶೆಟ್ಟಿ ತಂಬೂರಿ ಹಿಡಿದು, ಜೋಳಿಗೆ ಹಾಕಿ ಮತಬೇಟೆಗೆ ಮುಂದಾಗಿದ್ದಾರೆ. ಇವರು ಹೀಗೆ ವಿಭಿನ್ನವಾಗಿ ಮತ ಕೇಳುವ ಮೂಲಕವಾಗಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಕಳೆದ ಐದು ಬಾರಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇವರು ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಇವರಿಗೆ ಕಾರು, ಜೀಪ್, ಗರಗಸ, ಹಾರ್ಮೋನಿಯಂ ಚಿಹ್ನೆಯಾಗಿ ಪಡೆದು ಪರಾಭವಗೊಂಡಿದ್ದಾರೆ. ಆದರೆ ಈ ಬಾರಿ ಮಾತ್ರ ಅವರ ಕಾಯಕದ ಸಾಧನವೇ ಆದ ತಂಬೂರಿ ಚಿಹ್ನೆಯಾಗಿ ದೊರೆತಿದ್ದು ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.