– ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟ
ಚಿಕ್ಕಬಳ್ಳಾಪುರ: ತಾಲೂಕಿನ ಮಂಚನಬಲೆ ಗ್ರಾಮದಲ್ಲಿ ಕೊರೊನಾ ಸ್ಫೋಟವಾಗಿದೆ. ಗ್ರಾಮಕ್ಕೆ ಜಿಲ್ಲಾಧಿಕಾರಿ ಆರ್ ಲತಾ ಭೇಟಿ ಮಾಡಿ ಆತಂಕಕ್ಕೊಳಗಾಗಿದ್ದ ಗ್ರಾಮಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಮಂಚನಬಲೆ ಗ್ರಾಮ ಪಂಚಾಯತಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗಿವೆ. ಸದ್ಯ 28 ಸಕ್ರಿಯ ಪ್ರಕರಣಗಳಿದ್ದು, ಅದರಲ್ಲಿ 14 ಮಂದಿ ಮಂಚನಬಲೆ ಗ್ರಾಮದವರಾಗಿದ್ದಾರೆ. ಈ ಕೊರೊನಾದಿಂದ 3 ಮಂದಿ ಸಹ ಮೃತಪಟ್ಟಿದ್ದಾರೆ. ಆದರೆ ಜನ ಹೇಳುವ ಪ್ರಕಾರ ಕಳೆದ 10 ದಿನಗಳಲ್ಲಿ 10 ಮಂದಿ ಕೋರೋನಾ ಸೇರಿ ವಿವಿಧ ಶ್ವಾಸಕೋಶದ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಇದರಿಂದ ಗ್ರಾಮದ ಜನ ಸಾಕಷ್ಟು ಆತಂಕಗೊಂಡಿದ್ದರು.
ಈ ಮಧ್ಯೆ ಹೋಂ ಐಸೋಲೇಷನ್ ನಲ್ಲಿದ್ದ ಕೊರೊನಾ ಸೋಂಕಿತನೊರ್ವ ಮನೆಯಲ್ಲಿರದೆ ಒಡಾಡುತ್ತಿದ್ದನು. ಮತ್ತೊಂದೆಡೆ ವ್ಯಾಕ್ಸಿನೇಷನ್ ಪಡೆಯಲು ಗ್ರಾಮದ ಕೆಲ ಜನ ಹಿಂಜರಿತಿದ್ರು. ಈ ಎಲ್ಲಾ ಸಮಸ್ಯೆಗಳನ್ನ ತಿಳಿದ ನಿಮ್ಮ ಪಬ್ಲಿಕ್ ಟಿವಿ ವರದಿ ಸಹ ಬಿತ್ತರ ಮಾಡಿತ್ತು. ಇದಾದ ಬೆನ್ನಲ್ಲೇ ಡಿಸಿ ಆರ್.ಲತಾ ಹಾಗೂ ಡಿಎಚ್ಓ ಇಂದಿರಾ ಕಬಾಡೆ, ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಟಾಸ್ಕ್ ಪೋರ್ಸ್ ಸಭೆ ನಡೆಸಿದರು.
ಕೋವಿಡ್ ಸಂಬಂಧ ತೆಗೆದುಕೊಂಡ ಕ್ರಮಗಳ ಬಗ್ಗೆ ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರ ಬಳಿ ಮಾಹಿತಿ ಪಡೆದುಕೊಂಡರು. ಗ್ರಾಮಸ್ಥರಿಗೆ ಅಭಯ ತುಂಬಿದ ಡಿ ಸಿ ಆರ್ ಲತಾ, ಕಡ್ಡಾಯವಾಗಿ ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಂಡು ಕೊರೊನಾ ಕಡಿವಾಣಕ್ಕೆ ಜನ ಸಹಕಾರ ನೀಡುವಂತೆ ತಿಳಿಸಿದರು.