ನವದೆಹಲಿ: ಗೌರವಯುತವಾಗಿ ರಾಜಕಾರಣ ಮಾಡುತ್ತೇನೆ. ಇಲ್ಲಂದಲ್ಲಿ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಬಂಡಾಯ ಏಳಲ್ಲ, ಅಸಮಾಧಾನ ವ್ಯಕ್ತಪಡಿಸಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ರಚನೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ದೆಹಲಿಯಲ್ಲಿ ಯಾವುದೇ ನಾಯಕರನ್ನು ಭೇಟಿ ಮಾಡಲ್ಲ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಬಂದಿದ್ದೇನೆ. ಕೇಂದ್ರ ಸಚಿವರನ್ನು ಭೇಟಿ ಮಾಡುತ್ತೇನೆ. ಅವಕಾಶ ಸಿಕ್ಕರೆ ವರಿಷ್ಠರನ್ನು ಭೇಟಿ ಮಾಡುತ್ತೇನೆ. ಯಡಿಯೂರಪ್ಪ ಬಣದಲ್ಲಿ ಇದ್ದಿದ್ದಕ್ಕೆ ಮಂತ್ರಿಗಿರಿ ತಪ್ಪಿಲ್ಲ ಎಂದರು.
ಯಡಿಯೂರಪ್ಪ ಬಿಜೆಪಿಯ ಪ್ರಮುಖ ನಾಯಕರು. ಸಚಿವ ಸ್ಥಾನ ನೀಡಬೇಕು ಎಂಬುದು ಕ್ಷೇತ್ರದ ಜನರ ಆಸೆಯಾಗಿತ್ತು. ಮಂತ್ರಿಯಾಗಿದಿದ್ದರೇನು ಶಾಸಕನಾಗಿದ್ದೇನೆ, ಅದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬಿಎಸ್ವೈ ರಾಜೀನಾಮೆ ನೀಡುವ ಮೊದಲೇ ರಾಜೀನಾಮೆಗೆ ಮುಂದಾಗಿದ್ದ ಆನಂದ್ ಸಿಂಗ್
ಇದೇ ವೇಳೆ ಸಚಿವ ಆನಂದ್ ಸಿಂಗ್ ರಾಜೀನಾಮೆ ಕುರಿತು ಮಾತನಾಡಿದ ಅವರು, ಸಚಿವರ ಜೊತೆಗೆ ಮಾತನಾಡುತ್ತೇನೆ. ಅವರು ನಮ್ಮ ಸ್ನೇಹಿತರು ನಾನು ನಮ್ಮ ಸ್ನೇಹಿತರು. ಸಿಎಂ, ಬಿಎಸ್ವೈ ಎಲ್ಲ ಮಾತನಾಡಿದ್ದಾರೆ, ನಾವೂ ಮಾತಾಡುವುದಾಗಿ ಹೇಳಿದರು.