– ಪ್ರಿಯಕರನೊಂದಿಗೆ ಓಡಿ ಹೋಗುತ್ತಾಳೆಂದು ಕೊಂದೇಬಿಟ್ಟ
ಚೆನ್ನೈ: ತಂದೆಯೊಬ್ಬ ಮಗಳ ಕತ್ತು ಹಿಸುಕಿ ಮರ್ಯಾದಾ ಹತ್ಯೆ ಮಾಡಿರುವ ಘಟನೆ ತಮಿಳುನಾಡಿದ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ.
ಸೆಂಥರಕೈ ಮೃತ ಯುವತಿ. ಆರೋಪಿ ತಂದೆ ಬಾಲಾಜಿ ತನ್ನ ಮಗಳನ್ನು ಹತ್ಯೆ ಮಾಡಿದ್ದನು. ಆದರೆ ಸ್ನಾನ ಮಾಡುವಾಗ ಜಾರಿಬಿದ್ದು ಮೃತಪಟ್ಟಿದ್ದಾಳೆ ಎಂದು ಎಲ್ಲರನ್ನು ನಂಬಿಸಿದ್ದನು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಯುವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಗೊತ್ತಾಗಿದೆ.
ಏನಿದು ಪ್ರಕರಣ?
ಕಾಂಚೀಪುರಂ ಜಿಲ್ಲೆಯ ಆರೋಪಿ ಬಾಲಾಜಿಯ ಮಗಳು ಸೆಂಥರಕೈ ಮೂರು ದಿನಗಳ ಹಿಂದೆ ಸ್ನಾನಗೃಹದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆ ಸ್ನಾನ ಮಾಡುವಾಗ ಜಾರಿ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಗ್ರಾಮಸ್ಥರನ್ನು ನಂಬಿಸಿದ್ದನು. ಆದರೆ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಅನುಮಾನಗೊಂಡು ಯುವತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಮೃತದೇಹವನ್ನು ಕುಟುಂಬವರಿಗೆ ನೀಡಿದ್ದಾರೆ. ಕುಟುಂಬದವರು ತಕ್ಷಣ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿರುವುದು ಬಹಿರಂಗವಾಗಿದೆ. ನಂತರ ಪೊಲೀಸರು ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಅನುಮಾನದ ಮೇರೆಗೆ ಯುವತಿಯ ತಂದೆಯನ್ನು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಮೃತ ಸೆಂಥರಕೈ ಸ್ಥಳೀಯ ಯುವಕನನ್ನು ಪ್ರೀತಿಸುತ್ತಿದ್ದು, ಆತನೊಂದಿಗೆ ಸುತ್ತಾಡುತ್ತಿದ್ದಳು. ಇದನ್ನು ನೋಡಿದ ಆರೋಪಿ ಬಾಲಾಜಿ ಮಗಳಿಗೆ ಬೈದಿದ್ದಾನೆ. ಆಗ ಯುವತಿ ಆತನನ್ನೇ ಮದುವೆಯಾಗುವುದಾಗಿ ಹೇಳಿದ್ದಾಳೆ. ಆದರೆ ಆರೋಪಿಗೆ ತನ್ನ ಮಗಳು ಸ್ಥಳೀಯ ಯುವಕನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಆಗ ಯುವತಿಗೆ ವಿವಾಹ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಭಯ ಮತ್ತು ಕಷ್ಟಗಳ ನಡುವೆಯೂ ಆರೋಪಿ ಬಾಲಾಜಿ ತನ್ನ ಮಗಳನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ. ಆದರೆ ಯುವತಿ ಮದುವೆಯಾಗುವುದನ್ನು ನಿರಾಕರಿಸಿದ್ದಾಳೆ.
ಕೊನೆಗೆ ತಂದೆ ಬಾಲಾಜಿ ಮತ್ತು ಕುಟುಂಬ ಸದಸ್ಯರು ಆಕೆಯನ್ನು ಬಲವಂತವಾಗಿ ಮದುವೆಗೆ ಒಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಇದೇ ವೇಳೆ ತನ್ನ ಮಗಳು ಯುವಕನೊಂದಿಗೆ ಓಡಿ ಹೋಗಿ ಮದುವೆ ಮಾಡಿಕೊಂಡರೆ ಕುಟುಂಬದ ಮರ್ಯಾದೆ ಹಾಳಾಗುತ್ತದೆ ಎಂದು ಬಾಲಾಜಿ ಆತಂಕ ಪಟ್ಟಿದ್ದಾನೆ. ಕೊನೆಗೆ ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಸ್ನಾನಗೃಹದಲ್ಲಿ ಜಾರಿ ಬಿದ್ದು ಮೃತಪಟ್ಟಿದ್ದಾಳೆ ಎಂದು ನಂಬಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.