– ನೋವಿನ ಸಂಗತಿ ಹಂಚಿಕೊಂಡ ಶ್ರೀಗಳು
ತುಮಕೂರು: ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಶ್ರೀಗಳು ಸ್ವಾಗತಿಸಿದ್ದಾರೆ.
ಗೋ ಹತ್ಯೆ ನಿಷೇಧ ಮಸೂದೆ ಜಾರಿ ಹಿನ್ನೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಯ್ದೆಯನ್ನ ಮಂಡಿಸಿ ಅಂಗೀಕರಿಸಿದ್ದಾರೆ. ಬಹಳ ದಿನಗಳಿಂದ ಇದರ ಬೇಡಿಕೆ ಇತ್ತು. ಈಗಾಗಲೇ ಅನೇಕ ರಾಜ್ಯಗಳು ಗೋ ಹತ್ಯೆ ನಿಷೇಧ ಮಾಡಿವೆ. ಅದನ್ನೆಲ್ಲಾ ಪರಿಶೀಲಿಸಿ ನಮ್ಮ ಕರ್ನಾಟಕದಲ್ಲೂ ಕೂಡ ದೊಡ್ಡ ಅಭಿಲಾಷೆ ಇಟ್ಟುಕೊಂಡು ಗೋಹತ್ಯೆ ನಿಷೇಧವನ್ನು ಜಾರಿ ಮಾಡಿದ್ದಾರೆ ಎಂದರು.
ಗೋ ಹತ್ಯೆಯನ್ನು ಸರ್ಕಾರ ನಿಷೇಧ ಮಾಡಿದೆ ಅನ್ನೊದಕ್ಕಿಂತ ಪ್ರತಿಯೊಬ್ಬ ರೈತನೂ ಜಾಗೃತರಾಗಬೇಕು. ಗೋವನ್ನ ನಮ್ಮ ಮನೆಯ ಸದಸ್ಯ ಅಂತ ಭಾವಿಸಿ ಸಂರಕ್ಷಿಸಬೇಕು. ಒಂದು ದುಃಖಕರ ಸಂಗತಿ ಅಂದ್ರೆ ಹಸುವನ್ನ ಚೆನ್ನಾಗಿರುವವರೆಗೂ ದುಡಿಸಿಕೊಂಡು ಅದರಿಂದ ಪ್ರಯೋಜನ ಪಡೆದುಕೊಂಡು ಅದು ಕೊನೆಗಾಲದಲ್ಲಿ ನಿಶ್ಯಕ್ತಿ ಆದಾಗ ಯಾವ್ಯಾವುದೂ ರೀತಿಯಲ್ಲಿ ವಿಲೇವಾರಿ ಮಾಡೋದು ತುಂಬಾ ನೋವಿನ ಸಂಗತಿ. ಈ ಸಂಸ್ಕೃತಿ ಹೋಗಬೇಕು ಎಂದು ತಿಳಿಸಿದರು.
ರೈತರು ಮೊದಲು ಜಾಗೃತರಾಗಬೇಕು ಕೇವಲ ಕಾನೂನಿನಿಂದ ಏನೂ ಆಗಲ್ಲ. ಹಿಂದಿನಿಂದಲೂ ಗೋವುಗಳು ನಮ್ಮ ಸಂಪತ್ತು ಎಂದು ಭಾವಿಸಿಕೊಂಡು ಬಂದಿದ್ದೀವಿ. ಅಷ್ಟೇ ಅಲ್ಲ ಗೋವಿನಿಂದ ಉತ್ಪತ್ತಿಯಾಗೋ ಪಂಚಗವ್ಯಗಳು ಕೂಡ ಪವಿತ್ರವಾದದ್ದು ಎಮದು ಹೆಳಿದರು.
ಮಸೂದೆಯ ಪ್ರಮುಖ ಅಂಶಗಳು:
ಹಸು, ಕರು, ದನ, ಎಮ್ಮೆಗಳ ಹತ್ಯೆ ನಿಷೇಧ ಮಾಡುವುದು. ಹತ್ಯೆಗಾಗಿ ಗೋವುಗಳ ಸಾಗಣೆಗೆ ಸಂಪೂರ್ಣ ನಿರ್ಬಂಧ. ಗೋಹತ್ಯೆಗೆ 50 ಸಾವಿರದಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುವುದು. ಗೋಹತ್ಯೆ ಅಪರಾಧದಲ್ಲಿ 2ನೇ ಬಾರಿ ಸಿಕ್ಕಿಬಿದ್ರೆ 10 ಲಕ್ಷ ರೂ ದಂಡ. ಗೋಹತ್ಯೆಗೆ 3 ರಿಂದ 7 ವರ್ಷ ಕಾಲ ಜೈಲು ಶಿಕ್ಷೆ ಮತ್ತು ಅಪರಾಧಿಗಳಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನು ಇಲ್ಲ. 13 ವರ್ಷ ಮೇಲ್ಪಟ್ಟ ಎಮ್ಮೆಗಳ ಹತ್ಯೆಗೆ ಷರತ್ತುಬದ್ಧ ಒಪ್ಪಿಗೆ ನೀಡಿದ್ದು, ಸಂಬಂಧಿಸಿದ ಸಂಸ್ಥೆಗಳ ಅನುಮತಿ ಅಗತ್ಯವಾಗಿ ಪಡೆದುಕೊಳ್ಳುವುದು. ಗುಜರಾತ್, ಯುಪಿ ಮಾದರಿಯಲ್ಲಿ ಶಿಕ್ಷೆ, ದಂಡ ವಿಧಿಸಲಾಗುವುದು. ಗೋಹತ್ಯೆ ಪ್ರಕರಣಗಳ ವಿಚಾರಣೆ ವಿಶೇಷ ಕೋರ್ಟ್ ನಲ್ಲಿ ನಡೆಯಲಿದೆ.