ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಗೋಹತ್ಯೆ ನಿಷೇಧ ಕಾಯ್ದೆ ಸಂಬಂಧ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಜನರಿಂದ ಗೋ ಹತ್ಯೆಯನ್ನು ತಪ್ಪಿಸಲು ಮತ್ತು ಅವುಗಳನ್ನು ರಕ್ಷಿಸಲು ಸುಗ್ರೀವಾಜ್ಞೆಯನ್ನು ಇಂದಿನಿಂದ ಜಾರಿಗೆ ತರಲಾಗಿದೆ.
ಮೊದಲ ಬಾರಿ ಗೋ ಹತ್ಯೆ ಮಾಡುವವರಿಗೆ 3-7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಮತ್ತು 50,000ದಿಂದ 5 ಲಕ್ಷದವರೆಗೂ ದಂಡ ವಿಧಿಸಲಾಗುತ್ತದೆ. ಗೋ ಹತ್ಯೆ ಪುನಾರಾವರ್ತನೆಯಾದಲ್ಲಿ ತಪ್ಪಿತಸ್ಥರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷದಿಂದ 10 ಲಕ್ಷದವರೆಗೂ ದಂಡ ವಿಧಿಸಲಾಗುತ್ತದೆ.
ಕಾನೂನಿನ ಪ್ರಕಾರ ಜಾನುವಾರುಗಳ ವಧೆ ಮಾಡುವುದು ಹಾಗೂ ಅದಕ್ಕೆ ಸಹಕರಿಸುವುದು ಅಪರಾಧವಾಗಿದೆ. ಹತ್ಯೆ ಮಾಡುವ ಉದ್ದೇಶದಿಂದ ಜಾನುವಾರುಗಳ ಸಾಗಾಟ ಮತ್ತು ಸಾಗಾಟಕ್ಕೆ ಸಹಕರಿಸುವುದು ಕೂಡ ಅಪರಾಧವಾಗಿದೆ. ಅನಾರೋಗ್ಯಕ್ಕೊಳಗಾದ, ಸಾಂಕ್ರಾಮಿಕ ಕಾಯಿಲೆಗಳಿಂದ ಬಳಲುತ್ತಿರುವ 13 ವರ್ಷಕ್ಕಿಂತ ಮೇಲ್ಪಟ್ಟ ಜಾನುವಾರುಗಳನ್ನು ಮಾತ್ರ ಹತ್ಯೆ ಮಾಡಲು ಅನುಮತಿ ನೀಡಲಾಗಿದೆ. ಅದು ಪಶು ವೈದ್ಯಾಧಿಕಾರಿ ದೃಢೀಕರಿಸಿದರೆ ಮಾತ್ರ ಹತ್ಯೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಸುಗ್ರೀವಾಜ್ಞೆ ಅಡಿಯಲ್ಲಿ ಜಾನುವಾರುಗಳನ್ನು ರಕ್ಷಿಸುವ ಉತ್ತಮ ರೀತಿಯಲ್ಲಿ ವರ್ತಿಸುವ ವ್ಯಕ್ತಿಗಳ ವಿರುದ್ಧ ಯಾವುದೇ ಮೊಕದ್ದಮೆ, ಕಾನೂನು ಕ್ರಮ ಕೈಗೊಳ್ಳುವುದಿಲ್ಲ ತಿಳಿಸಲಾಗಿದೆ.
ಕಳೆದ ತಿಂಗಳು ಚಳಿಗಾಲ ಅಧಿವೇಶನದಲ್ಲಿ ಕಾಂಗ್ರೆಸ್ ತೀವ್ರ ವಿರೋಧದ ನಡುವೆ ಗೋಹತ್ಯೆ ಮತ್ತು ಜಾನುವಾರು ಸಂರಕ್ಷಣೆ ಮಸೂದೆಯನ್ನು ಸದನದಲ್ಲಿ ಪಾಸ್ ಮಾಡಲು ಸರ್ಕಾರಕ್ಕೆ ಒಪ್ಪಿಗೆ ಸಿಗಲಿಲ್ಲ.ಕಾಂಗ್ರೆಸ್ ಹಾಗೂ ಜೆಡಿಎಸ್ ಮಸೂದೆ ರೈತ ವಿರೋಧಿ ಎಂದು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದವು. ಈ ಸಂಬಂಧ ಇದೀಗ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದೆ.