ಮೈಸೂರು: ಗೋಮಾಂಸ ತಿನ್ನೋದೇ ಒಂದು ದೊಡ್ಡ ಸಾಧನೆ ಅಂತಿರೋ ನಿಮ್ಮ ಮೈಸೂರಿನ ಮುಖಂಡರ ಹೇಳಿಕೆ ಪ್ರತಿಕ್ರಿಯಿಸುವುದು ನಮಗೆ ಶೋಭೆ ತರಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಜನಸೇವಕ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಗೋಮಾಂಸ ಹೇಳಿಕೆಯ ಬಗ್ಗೆ ಯಾವುದೇ ಪ್ರತಿಕ್ರಿಯೆ ಕೊಡುತ್ತಿಲ್ಲ. ಅನೇಕ ರೀತಿಯ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿರುತ್ತಾರೆ. ಬೇಕು ಅಂತಾನೇ ಕೆಣಕುತ್ತಾರೆ. ನಾವೇನು ಉತ್ತರ ಕೊಡುತ್ತೇವೆ ಎಂಬುದನ್ನು ಮಾಧ್ಯಮದವರು ಕೂಡ ಕಾಯುತ್ತಿದ್ದಾರೆ. ನಾವು ಮಾಧ್ಯಮಕ್ಕೆ ಉತ್ತರ ಕೊಡಬೇಕಾಗಿಲ್ಲ, ನಮಗೆ ನಾವೇ ಉತ್ತರ ಕೊಡಬೇಕಾಗಿದೆ. ನಮಗೆ ಕೊಟ್ಟಿರುವ ಜವಾಬ್ದಾರಿ ನಿರ್ವಹಿಸಿ ಗ್ರಾಮ ಪಂಚಾಯತ್ ಸದಸ್ಯ ಅಂದ್ರೆ ಹೇಗಿರಬೇಕು ಅಂದ್ರೆ ಹೀಗಿರಬೇಕು ಅಂತ ಜನ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ಗ್ರಾಮ ರಾಜ್ಯ ಮೂಲಕ ರಾಮರಾಜ್ಯ ಸ್ಥಾಪನೆ ಎಂಬ ಗಾಂಧೀಜಿ ಕನಸು ನನಸು ಮಾಡ್ತೀವಿ. ಕರ್ನಾಟಕದಲ್ಲಿ ಬಿಜೆಪಿ ಶಕ್ತಿಯುತವಾಗಿ ಬೆಳೆಯುತ್ತಿದೆ. ಬೇರೆ ರಾಜ್ಯಗಳಿಗೂ ಮಾರ್ಗದರ್ಶನ ನೀಡುವ ರೀತಿ ಪಕ್ಷ ಬೆಳೆಯುತ್ತಿದೆ. ಸಂತೋಷ ಎಂದು ಅಮಿತ್ ಶಾ, ಜೆಪಿ ನಡ್ಡಾ ಇಬ್ಬರು ಹೇಳಿದರು. ನನ್ನನ್ನು ಸಂತೋಷದಿಂದ ದೆಹಲಿಯಿಂದ ಕಳಿಸಿ ಕೊಟ್ಟಿದ್ದಾರೆ ಎಂದರು.
ಅಸಾಧ್ಯವಾದದ್ದು ಯಾವುದೂ ಇಲ್ಲ. ಸಾಧನೆ ಮಾತಾಡಬೇಕು, ಮಾತಾಡುವುದೇ ಸಾಧನೆ ಆಗಬಾರದು. ಪುರಸಭೆ ಸದಸ್ಯನಾಗಿ ಇಡೀ ರಾಜ್ಯವನ್ನು ಹುಚ್ಚನ ರೀತಿ ಅಲೆದಿದ್ದೇನೆ. ಕಾಂಗ್ರೆಸ್ ಎಲ್ಲಿದೆ? ಅವರ ಬಗ್ಗೆ ನಾವೇಕೆ ಮಾತಾಡಬೇಕು ಎಂದು ತಿಳಿಸಿದರು.