ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಮೂರು ವರ್ಷಗಳ ಬಳಿಕ ಗೋಪಾಲಸ್ವಾಮಿ ದರ್ಶನಕ್ಕೆ ಗಜರಾಜ ಬಂದಿದ್ದಾನೆ.
ಈ ಹಿಂದೆಯೂ ದೇವಸ್ಥಾನದ ಸಿಬ್ಬಂದಿ ನೀಡುತ್ತಿದ್ದ ಪ್ರಸಾದದ ಆಸೆಗೆ ಕಾಡಾನೆ ಬರುತ್ತಿತ್ತು. ಪೌರಾಡಳಿತ ಇಲಾಖೆ ನಿರ್ದೇಶಕಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ ಕಾವೇರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಕಾಡಾನೆ ಬಂದಿದೆ. ಈ ವೇಳೆ ಕಾವೇರಿ ಅವರು ಕಾಡಾನೆಗೆ ದೇವಸ್ಥಾನದ ಪ್ರಸಾದ ಸಿಹಿಪೊಂಗಲ್, ಬೆಲ್ಲ ತಿನಿಸಿದ್ದಾರೆ.
ಕಾವೇರಿ ಅವರು ಆನೆಗೆ ಆಹಾರ ನೀಡಿದ ಬೆನ್ನಲ್ಲೇ ಅವರ ವಿರುದ್ಧ ವನ್ಯಜೀವಿ ನಿಯಮಗಳ ಉಲ್ಲಂಘನೆ ಆರೋಪ ಕೇಳಿಬಂದಿದೆ. ಪ್ರಸಾದದ ಆಮಿಷಕ್ಕೆ ಒಳಗಾಗಿ ಕಾಡಾನೆ ಅಲ್ಲಿಗೆ ಮತ್ತೆ ಮತ್ತೆ ಬರಬಹುದು. ಅರಣ್ಯದಂಚಿನ ಗ್ರಾಮಗಳಿಗೆ ದಾಳಿ ಮಾಡಬಹುದು. ಮಾನವ ವನ್ಯಜೀವಿ ಸಂಘರ್ಷಕ್ಕೆ ಕಾರಣವಾಗಬಹುದು. ಐಎಎಸ್ ಅಧಿಕಾರಿ ವಿವೇಕಯುತವಾಗಿ ವರ್ತಿಸಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪರಿಸರವಾದಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ.