ಹಾವೇರಿ: ಗೆಳೆಯನ ಮರಣದ ದಿನದಂದು ಆತನ ಸ್ಮರಣಾರ್ಥವಾಗಿ ಗ್ರಾಮದ ಯುವಕರು ಹಾಗೂ ಗೆಳೆಯರು ಸೇರಿ ರಕ್ತದಾನ ಶಿಬಿರ ಮಾಡುವ ಮೂಲಕ ವಿಶೇಷ ಕಾರ್ಯಕ್ರಮ ಮಾಡಿದ್ದಾರೆ.
ಹಾವೇರಿಯ ಮರೋಳ ಗ್ರಾಮದ ಮಾರುತಿ ಹೆಗ್ಗಪ್ಪ ಹೆಸ್ಕಾಂ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ವಿದ್ಯುತ್ ತಂತಿ ಸ್ವರ್ಶಿಸಿ ಕಳೆದ ವರ್ಷ ಮೃತಪಟ್ಟಿದ್ದರು. ಹಾಗಾಗಿ ಈ ವರ್ಷ ಅದೇ ದಿನ ಸ್ನೇಹಿತರೆಲ್ಲಾ ಸೇರಿ ಮರೋಳ ಗ್ರಾಮದಲ್ಲಿ ರಕ್ತದಾನ ಶಿಬಿರ ಮಾಡುವ ಮೂಲಕ ಅರ್ಥಪೂರ್ಣವಾಗಿ ಗೆಳೆಯನನ್ನು ನೆನಪಿಸಿಕೊಂಡಿದ್ದಾರೆ.
ಗ್ರಾಮದ ಸ್ನೇಹಜೀವಿ ಗೆಳೆಯರ ಬಳಗ, ಸರ್ಕಾರಿ ಪ್ರೌಢಶಾಲೆಯ ಮರೋಳ ಹಾಗೂ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಅಕ್ಕಿಆಲೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ನಡೆಯಿತು.
ರಕ್ತದಾನ ಶಿಬಿರವನ್ನು 35 ಬಾರಿ ರಕ್ತದಾನ ಮಾಡಿದ ರಕ್ತಸೈನಿಕ ವಿಜಯಕುಮಾರ್ ದೇವರಗುಂಡಿಮಠ ಉದ್ಘಾಟಿಸಿದರು. ಗ್ರಾಮದ ಗೆಳೆಯರು ಹಾಗೂ ಯುವಕರು ಸೇರಿ ಒಟ್ಟು 61 ಜನ ರಕ್ತದಾನ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ರಕ್ತದಾನಿ ವಿಜಯಕುಮಾರ್ ಸ್ವತಃ 35ನೇ ಬಾರಿ ರಕ್ತದಾನ ಮಾಡಿ ಯುವಕರಿಗೆ ಪ್ರೇರಣೆ ನೀಡಿದರು. ಜಿಲ್ಲಾ ರಕ್ತನಿಧಿ ಕೇಂದ್ರ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಶಿಬಿರದಲ್ಲಿ ಭಾಗವಹಿಸಿದ್ದರು.