ಬೆಂಗಳೂರು: ಯುವತಿಯ ವೀಡಿಯೋ ಹೇಳಿಕೆ ಬಿಡುಗಡೆಯಾದ ಬೆನ್ನಲ್ಲೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ.
ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದ ಎಂ.ವಿ.ನಾಗರಾಜ್ ಜೊತೆ ಬಸವರಾಜ್ ಬೊಮ್ಮಾಯಿ ಅವರ ಆರ್ಟಿ ನಗರದ ಮನೆಗೆ ಭೇಟಿ ನೀಡಿ, ಪ್ರಕರಣದ ಸಂಬಂಧ ಮಹತ್ವದ ಚರ್ಚೆ ನಡೆಸಿದ್ದಾರೆ. ಸಂತ್ರಸ್ತೆಯ ವಿಡಿಯೋ ಬಿಡುಗಡೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ವಿಡಿಯೋದಲ್ಲಿ ಜಾರಕಿಹೊಳಿ ಕೆಲಸದ ಆಮೀಷದ ಬಗ್ಗೆ ಯುವತಿ ತನ್ನ ವೀಡಿಯೋ ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾಳೆ. ಹೀಗಾಗಿ ಮುಂದಿನ ಬೆಳವಣಿಗೆಗಳ ಕುರಿತು ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಇಂತಹ 10 ವೀಡಿಯೋ ಬರಲಿ, ನಾನು ಹೆದರಲ್ಲ. ಗೃಹ ಸಚಿವರಿಗೆ ದೂರು ಕೊಟ್ಟಿದ್ದೇನೆ. ಶೀಘ್ರದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದೇನೆ. ಯುವತಿಯ ಹೇಳಿಕೆ ವೀಡಿಯೋ ಬಿಡುಗಡೆ ಮಾಡಿರುವುದು ಷಡ್ಯಂತ್ರ. ದೂರು ಕೊಟ್ಟ ತಕ್ಷಣವೇ ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಾವು ಎಲ್ಲದಕ್ಕೂ ತಯಾರಾಗಿದ್ದೇವೆ. ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ. ತನಿಖೆಯಲ್ಲಿ ಎಲ್ಲ ತಿಳಿಯಲಿದೆ ಎಂದು ಅವರು ಹೇಳಿದರು.