– ಫೋನ್ ನೆಟ್ವರ್ಕ್ ಸಿಕ್ಕಿದ್ದರು, ಯುವಕರು ಸಿಕ್ಕಿರಲಿಲ್ಲ
ಚಿಕ್ಕಮಗಳೂರು: ಪ್ರವಾಸಕ್ಕೆ ಹೋಗಿದ್ದ ನಾಲ್ವರು ಯುವಕರು ವಾಪಸ್ ಬರಲು ದಾರಿ ಗೊತ್ತಾಗದೆ ಗುಡ್ಡದ ತುದಿಯಲ್ಲೇ ದಾರಿತಪ್ಪಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಮೀಸಲು ಅರಣ್ಯದ ರಾಣಿಝರಿ ಹಾಗೂ ಬಲ್ಲಳರಾಯನ ಕೋಟೆಯಲ್ಲಿ ನಡೆದಿದೆ.
ಈ ಜಾಗ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಈ ಗುಡ್ಡದ ತುದಿಗೆ ಹೋದ್ರೆ ಸ್ವರ್ಗ ಅಂಗೈಯಲ್ಲಿ ಎಂಬ ಅನುಭವವಾಗುತ್ತೆ. ಆದರೆ ಇಲ್ಲಿಗೆ ಹೋಗುವ ಮಾರ್ಗ ಕೂಡ ಅತಿ ದುಸ್ಥರವಾಗಿದೆ. ಹೊಸಬರು ಬೇಗ ಹೋಗಿ ಬೇಗ ವಾಪಸ್ ಬರೋದು ಒಳ್ಳೆಯದು. ಇಲ್ಲಿ ಫೋನ್ ಸಂಪರ್ಕ ಕೂಡ ಸಿಗಲ್ಲ. ಸಿಕ್ಕರೂ ಅಲ್ಲೊಂದು, ಇಲ್ಲೊಂದು ಪಾಯಿಂಟ್ ನೆಟ್ವರ್ಕ್ ಸಿಗುತ್ತೆ. ಆದರೆ ಇಲ್ಲಿನ ಸೌಂದರ್ಯ ಸವಿಯಲು ಹೋದ ಚಿಕ್ಕಮಗಳೂರಿನ ನಾಲ್ವರು ಯುವಕರು ವಾಪಸ್ ಬರಲು ದಾರಿ ಗೊತ್ತಾಗದೆ ಅಲ್ಲೇ ಉಳಿದಿದ್ದರು.
ದಾರಿ ಹುಡುಕಿಕೊಂಡು ಮತ್ತೆಲ್ಲಿಗೆ ಹೋಗಿದ್ದಾರೋ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿರಲಿಲ್ಲ. ಕೆಲವೆಡೆ ಸಿಕ್ಕ ನೆಟ್ವರ್ಕ್ ನಿಂದ ಅವರು ದಾರಿ ತಪ್ಪಿದ್ದಾರೆಂಬುದು ಗೊತ್ತಾಗಿತ್ತು. ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳು ನಾಪತ್ತೆಯಾಗಿರೋರಿಗಾಗಿ ಹುಡುಕಾಟ ಆರಂಭಿಸಿದ್ದರು. ರಾಣಿಝರಿಗೆ ಹೋದ ಯುವಕರು ಅಲ್ಲಿಂದ ಬಲ್ಲಾಳರಾಯನ ದುರ್ಗಕ್ಕೆ ಹೋಗುವಾಗ ದಾರಿ ತಪ್ಪಿದ್ದರು. ಅಲ್ಲಿಂದ ವಾಪಸ್ ಕೊಟ್ಟಿಗೆಹಾರಕ್ಕೂ ಬರಲು ಗೊತ್ತಾಗದೆ ಕತ್ತಲಲ್ಲಿ ಕಂಗಾಲಾಗಿದ್ದರು.
ಮೊಬೈಲ್ ನೆಟ್ವರ್ಕ್ ಸಿಗುತ್ತಿತ್ತು. ಸ್ಥಳೀಯರು ಹುಡುಕಾಡುತ್ತಿದ್ದರು. ಆದರೆ ನಾಪತ್ತೆಯಾಗಿರುವ ಯುವಕರು ತಾವಿರೋ ಜಾಗದ ಬಗ್ಗೆಯೂ ಸಂಕ್ಷಿಪ್ತ ಮಾಹಿತಿ ನೀಡದ ಹಿನ್ನೆಲೆ ಹುಡುಕುವವರು ಕೂಡ ಎಲ್ಲಿ ಹುಡುಕುವುದು ಎಂದು ದಾರಿಕಾಣದಂತಾಗಿತ್ತು. ದಾರಿಕಾಣದ ನಾಪತ್ತೆಯಾಗಿರೋ ಯುವಕರು ಸಹಾಯಕ್ಕಾಗಿ ಬೇಡಿಕೊಂಡಿದ್ದರು. ಆದರೆ ಸ್ಥಳೀಯರು ಹಾಗೂ ಅರಣ್ಯಾಧಿಕಾರಿಗಳಿಗೂ ಕೂಡ ಅವರಿರುವ ಜಾಗದ ಮಾಹಿತಿ ಸಿಗದೆ ಹುಡುಕುವುದು ಕಷ್ಟವಾಗಿತ್ತು. ಸದ್ಯ ನಾಪತ್ತೆಯಾದ ಯುವಕರು ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.