ಚಾಮರಾಜನಗರ: ರಾಜ್ಯದಲ್ಲೇ ಕೊರೊನಾ ಮುಕ್ತ ಜಿಲ್ಲೆಯಾಗಿದ್ದ ಚಾಮರಾಜನಗರದಲ್ಲೂ ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದೆ. ಹೆಮ್ಮಾರಿಗೆ ಹೆದರಿದ ಗುಂಡ್ಲುಪೇಟೆ ಪಟ್ಟಣದ ಜನ ತಮ್ಮ ರಕ್ಷಣೆಗೆ ಮುಂದಾಗಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದ ಸಂದರ್ಭದಲ್ಲೂ ಗಡಿ ಜಿಲ್ಲೆ ಚಾಮರಾಜನಗರ ಸೋಂಕು ಮುಕ್ತ ಜಿಲ್ಲೆಯಾಗಿತ್ತು. ಜೂನ್ 9ರಂದು ಅದ್ಯಾವ ಮಾಯೆಯಲ್ಲಿ ಸೋಂಕು ವಕ್ಕರಿಸಿತೋ ಚಾಮರಾಜನಗರದಲ್ಲೂ ಟೆನ್ಷನ್ ಶುರುವಾಗಿ ಹೋಯ್ತು. ವೈದ್ಯಕೀಯ ವಿದ್ಯಾರ್ಥಿ, ಟೆಂಪೋ ಚಾಲಕ, ಪೊಲೀಸ್ ಪೇದೆ, ಭೂ ಮಾಪಕಿ, ಎಎಸ್ಐ, ಲ್ಯಾಬ್ ಟಿಕ್ನಿಷಿಯನ್ ಹೀಗೆ 33 ಕೊರೋನಾ ಪ್ರಕರಣಗಳು ವರದಿಯಾಗಿದೆ. ಗುಂಡ್ಲುಪೇಟೆ ಪಟ್ಟಣದಲ್ಲೇ 18 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ.
ಗುಂಡ್ಲುಪೇಟೆಯ ಮಹದೇವಪ್ರಸಾದ್ ನಗರದ ಕಂಟೈನ್ಮೆಂಟ್ ಝೋನ್ ಒಂದರಲ್ಲೇ ಮಹಿಳಾ ಪೊಲೀಸ್ ಪೇದೆ ಸೇರಿದಂತೆ 15 ಮಂದಿಗೆ ಕೊರೊನಾ ದೃಢಪಟ್ಟಿದೆ. ಗುಂಡ್ಲುಪೇಟೆಯ ಪಟ್ಟಣದ ಪೊಲೀಸ್ ಠಾಣೆ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯನ್ನು ಸೀಲ್ಡೌನ್ ಮಾಡಲಾಗಿದೆ. ಈ ಹಿನ್ನೆಲೆ ಕೊರೊನಾ ನಿಯಂತ್ರಣಕ್ಕೆ ಗುಂಡ್ಲುಪೇಟೆಯಲ್ಲಿ ಶಾಸಕ ನಿರಂಜನ್ ಕುಮಾರ್ ನೇತೃತ್ವದಲ್ಲಿ ಸರ್ವ ಪಕ್ಷಗಳ ಸಭೆ ನಡೆಯಿತು. ಸಭೆಯಲ್ಲಿ ಸ್ವಯಂಘೋಷಿತ ಲಾಕ್ ಮಾಡಲು ಸರ್ವಾನುಮತದಿಂದ ತೀರ್ಮಾನಿಸಿದ್ದಾರೆ. ಅಗತ್ಯ ವಸ್ತು ಹೊರತುಪಡಿಸಿ ಉಳಿದೆಲ್ಲಾ ಅಂಗಡಿಮುಂಗಟ್ಟುಗಳ ಬಂದ್ ಮಾಡಲು ನಿರ್ಧಾರ ಮಾಡಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿ ಪ್ರತಿನಿತ್ಯ ಸಂಜೆ 4 ರಿಂದ ಬೆಳಗ್ಗೆ 7ರವರೆಗೆ ಸ್ವಯಂ ಬಂದ್ ಮಾಡಲಾಗುತ್ತಿದೆ. ಇನ್ನೂ ಬೆಳಗ್ಗೆ 7ರಿಂದ ಸಂಜೆ 4ರವರೆಗೆ ವ್ಯಾಪಾರ ವಹಿವಾಟು ನಡೆಸಲು ತೀರ್ಮಾನ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ದಿನದ ಸ್ವಯಂ ಲಾಕ್ ಡೌನ್ ಯಶಸ್ವಿಯಾಗಿದೆ. ಜನರು, ವರ್ತಕರು ಕೈಗೊಂಡ ಸ್ವಯಂ ಲಾಕ್ ಡೌನ್ ಗೆ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್ಡೌನ್ನಿಂದಾದ್ರೂ ಸೋಂಕು ಕಂಟ್ರೋಲ್ಗೆ ಬರುತ್ತಾ ನೋಡಬೇಕು.