ಮುಂಬೈ: ಗಾಳಿಪಟ ಹಿಡಿಯಲು ಹೋಗಿ ಸಗಣಿ ತುಂಬಿದ್ದ ಗುಂಡಿಗೆ ಬಿದ್ದು 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಮೃತ ಬಾಲಕನನ್ನು ಧ್ರುವ ಜಾಧವ್ ಎಂದು ಗುರುತಿಸಲಾಗಿದ್ದು, ಈತ ಪಶ್ಚಿಮದ ಕಂಡಿವಲಿ ಪ್ರದೇಶದ ಶಂಕರ್ ಪಾದ ನಿವಾಸಿ. ಈತ 5 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮಕರ ಸಂಕ್ರಾತಿ ದಿನದಂದು ಆಟವಾಡುತ್ತಿದ್ದ ಬಾಲಕ, ಮಧ್ಯಾಹ್ನ ಗಾಳಿಪಟ ಹಿಡಿಯುವ ಪ್ರಯತ್ನದಲ್ಲಿ ಓಡಿ ಹೋಗಿ ಕಾಲು ಜಾರಿ ಸಗಣಿ ಗುಂಡಿಗೆ ಬಿದ್ದಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಯಲ್ಲಿ ಅನೇಕರ ನಿರ್ಲಕ್ಷ್ಯಗಳು ಎದ್ದು ಕಾಣುತ್ತಿದ್ದು, ಸದ್ಯಕ್ಕೆ ಈ ವಿಚಾರವಾಗಿ ಆಕಸ್ಮಿಕ ಘಟನೆ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ದಿನವಿಡೀ ಬಾಲಕ ಗಾಳಿಪಟ ಆಡಿಸುತ್ತಿದ್ದನು. ಈತನ ಮನೆಯ ಸಮೀಪ ಖಾಲಿ ಸೈಟ್ ನಲ್ಲಿ ಸಗಣಿರಾಶಿಯ ಹಳ್ಳ ಇದ್ದು, ಗಾಳಿಪಟ ಹಾರಿಸುತ್ತಿದ್ದಾಗ ಅದು ಸಗಣಿರಾಶಿ ಇರುವ ಗುಂಡಿಗೆ ಬಿದ್ದಿದೆ. ಆದರೆ ಆಳವಿದೆ ಎಂದು ತಿಳಿಯದ ಬಾಲಕ ಗಾಳಿಪಟ್ಟ ತೆಗೆದುಕೊಳ್ಳಲು ಹೋಗಿದ್ದಾನೆ. ಈ ವೇಳೆ ಆತ ಗುಂಡಿಗೆ ಬಿದ್ದಿದ್ದಾನೆ. ಬಳಿಕ ರಕ್ಷಣೆಗಾಗಿ ಕೂಗಿದ್ದಾನೆ.
ಇತ್ತ ಬಾಲಕನ ದನಿಯನ್ನು ಪಕ್ಕದಲ್ಲಿಯೇ ಕಟ್ಟಡ ನಿರ್ಮಾಣ ಮಾಡುತ್ತಿದ್ದ ಕಾರ್ಮಿಕರು ಕೇಳಿಸಿಕೊಂಡಿದ್ದಾರೆ. ಅಲ್ಲದೆ ಸಲ್ಲೇ ಇದ್ದ ಸ್ಥಳೀಯರು ಕೂಡ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ಬಾಲಕ ಸಗಣಿ ಗುಂಡಿಗೆ ಬಿದ್ದಿರುವುದು ಬೆಳಕಿಗೆ ಬಂದಿದೆ.
ಸಗಣಿ ಹಳ್ಳ ಅಪಾಯಕಾರಿಯಾಗಿರುವ ಕಾರಣ ಯಾರು ಕೂಡ ಕೆಳಗೆ ಇಳಿದು ಆತನನ್ನು ರಕ್ಷಿಸಲು ಮುಂದಾಗಲಿಲ್ಲ. ಬಳಿಕ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಮತ್ತು ಅಗ್ನಿ ಶಾಮಕದಳದವರು ಕೂಡ ಹಳ್ಳಕ್ಕೆ ಇಳಿಯಲು ಒಪ್ಪಲಿಲ್ಲ. ಅಷ್ಟೊತ್ತಿಗಾಗಲೇ ಜಾಧವ್ ಸಂಪೂರ್ಣ ಸಗಣಿಯಲ್ಲಿ ಮುಳುಗಿ ಹೋಗಿದ್ದನು. ಕೊನೆಗೆ ಅಧಿಕಾರಿಗಳು ಹತ್ತಿರದ ಕೆಲ ಕಾರ್ಮಿಕರ ಸಹಾಯದಿಂದ ಬಾಲಕನನ್ನು ಮೇಲಕ್ಕೆ ಎತ್ತಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.