– ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ
ಚಿಕ್ಕೋಡಿ: ಮಹಾತ್ಮ ಗಾಂಧಿಯವರನ್ನು ಕೊಂದವರು ಮತಾಂಧರು. ಅಂತಹ ಮತಾಂಧ ಗೋಡ್ಸೆ ಬಿಜೆಪಿ ಹಾಗೂ ಆರ್.ಎಸ್.ಎಸ್ನ ಆರಾಧ್ಯ ದೈವ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದಲ್ಲಿ ಎನ್ಎಸ್ ಹರಡೇಕರ ಸೇವಾದಳ ತರಬೇತಿ ಕೇಂದ್ರದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ ಒಡೆದು, ಕೋಮು ಗಲಭೆ ಮಾಡಿಸುವುದೇ ಬಿಜೆಪಿ ಪಕ್ಷದ ಕೆಲಸವಾಗಿದೆ ಎಂದು ಗುಡುಗಿದರು.
ಸದ್ಯ ಸಂವಿಧಾನ ಕೋಮುವಾದಿಗಳ ಕೈಯಲ್ಲಿ ಇದೆ. ಅದನ್ನು ರಕ್ಷಣೆ ಮಾಡುವ ಕೆಲಸ ಆಗಬೇಕಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಕೆಡವಿ ಸಂವಿಧಾನ ಸುಟ್ಟು ಹಾಕಬೇಕು ಎಂದವರು ಇಂದು ಬಿಜೆಪಿ ರಾಷ್ಟ್ರೀಯ ಯೂತ್ನ ಅಧ್ಯಕ್ಷರಾಗಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹರಿಹಾಯ್ದರು.
ಯಡಿಯೂರಪ್ಪನ ಮೊಮ್ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ಪಡೆದರು ಅವರು ಮಾತ್ರ ರಾಜೀನಾಮೆ ಕೊಡುತ್ತಿಲ್ಲ. ಪ್ರೊವ್ ಮಾಡಿ ರಾಜೀನಾಮೆ ಕೊಡುತ್ತೇನೆ ಅಂತಾರೆ. ಪ್ರೂವ್ ಮಾಡಲು ತನಿಖೆ ನಡೆಸುವವರು ಯಾರು? ಮೊದಲು ತನಿಖೆಯಾಗಲಿ ಅವರ ಮೇಲಿರುವ ಆರೋಪ ಸಾಬೀತಾಗದೇ ಇದ್ದಲ್ಲಿ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸಿದ್ದರಾಮಯ್ಯ ಸಿಎಂ ಅವರಿಗೆ ಸವಾಲು ಎಸೆದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವುಕುಮಾರ್ ಮಾತನಾಡಿ, ಸೊನೀಯಾ ಗಾಂಧಿ ಆದೇಶದಂತೆ ರೈತ ವಿರೋಧಿ ಮಸೂದೆಗಳ ವಿರುದ್ಧ ರಾಜ್ಯಾದ್ಯಂತ ಸಹಿ ಸಂಗ್ರಹಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವುದು ಎಂದರು. ಸಮಾರಂಭದಲ್ಲಿ ಮಾಸ್ಕ್ ಬಳಕೆ ಮತ್ತು ಸಾಮಾಜಿಕ ಅಂತರ ಮರೆಯಾಗಿತ್ತು. ಸಮಾರಂಭದ ಬಳಿಕ ಡಿಕೆಶಿ ಜೊತೆಗೆ ಸೆಲ್ಫಿಗಾಗಿ ಕೈ ಕಾರ್ಯಕರ್ತರು ಮುಗಿಬಿದ್ದರು.