– ತಿಂಗಳ ಹಿಂದೆಷ್ಟೇ ತಂದೆ ಕಳೆದುಕೊಂಡಿದ್ದ ಅರೋಪಿ
ಕೋಲಾರ: ಗಾಂಜಾ ಮತ್ತಿನಲ್ಲಿ ಅಪ್ರಾಪ್ತ ಬಾಲಕ ಚಾಕುವಿನಿಂದ ತನ್ನ ಚಿಕ್ಕಪ್ಪನನ್ನೇ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಿಲ್ಲೆಯ ಮಾಲೂರು ತಾಲೂಕಿನ ಬೆನ್ನಘಟ್ಟ ಗ್ರಾಮದಲ್ಲಿ ಘಟನೆ ನಡೆದಿದ್ದು, ತಮಿಳುನಾಡು ಗಡಿಯಲ್ಲಿ ಹೆಚ್ಚು ಸಿಗುವ ಗಾಂಜಾವನ್ನ ಅಪ್ಪ-ಮಗ ಹೊಡೆದಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡಿದ್ದು, ಕುಡಿದ ಅಮಲಿನಲ್ಲಿ ಅಪ್ರಾಪ್ತ ಚಿಕ್ಕಪ್ಪ ವಿಜಯ್ ಕುಮಾರ್ ನನ್ನೇ ಕೊಲೆ ಮಾಡಿದ್ದಾನೆ.
ಕಳೆದ ರಾತ್ರಿ ಕೊಲೆಯಾದ ವಿಜಯ್ ಕುಮಾರ್ ಹಾಗೂ ಆರೋಪಿ ಇಬ್ಬರು ಒಟ್ಟಿಗೆ ಗಾಂಜಾ ಹೊಡೆದು ಕ್ಷುಲ್ಲಕ ಕಾರಣಕ್ಕೆ ತಮ್ಮ ಮನೆ ಬಳಿ ಜಗಳ ಮಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೈಕೈ ಮಿಲಾಯಿಸಿದ್ದಾರೆ. ನಶೆಯಲ್ಲಿದ್ದ ಚಿಕ್ಕಪ್ಪ ಮನೆಯ ಮುಂದೆ ಮಲಗಿದ್ದ ವೇಳೆ ದಾಳಿ ಮಾಡಿರುವ ಆರೋಪಿ, ಚಾಕುವಿನಿಂದ ಕುತ್ತಿಗೆಗೆ ಚುಚ್ಚಿದ್ದಾನೆ. ತೀವ್ರ ರಕ್ತ ಸ್ರಾವವಾಗಿ ತಂದೆ ಸಮಾನದ ವಿಜಯ್ ಕುಮಾರ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇದನ್ನ ಗಮನಿಸಿದ ಗ್ರಾಮಸ್ಥರು ಆರೋಪಿಯನ್ನ ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿ, ಮಾಲೂರು ಪೊಲಿಸರಿಗೆ ಒಪ್ಪಿಸಿದ್ದಾರೆ.
ಕೊಲೆಯಾದ ವಿಜಯ್ ಕುಮಾರ್ ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಹೆಂಡತಿಯೂ ಸಹ ಈತನ ಕುಡಿತದ ಕಾಟ ತಾಳದೆ ತನ್ನ ತವರು ಮನೆ ಸೇರಿದ್ದಾಳೆ. ಕೆಲ ದಿನಗಳ ನಂತರ ಹೆಂಡತಿಯ ತವರೂರಿಲ್ಲಿಯೇ ಬಿಡಾರ ಹೂಡಿದ್ದ ಈತ ವಾರಕ್ಕೊಮ್ಮೆ ಬೆನ್ನಘಟ್ಟ ಗ್ರಾಮಕ್ಕೆ ಬರುತ್ತಿದ್ದ. ಆದರೆ ನಶೆಯಲ್ಲಿದ್ದ ಅಣ್ಣನ ಮಗನೊಂದಿಗೆ ಜಗಳ ಮಾಡುತ್ತಿದ್ದ ಗ್ರಾಮಸ್ಥರು, ಇವರಿಬ್ಬರದು ಮಾಮೂಲಿ ಎಂದುಕೊಂಡಿದ್ದರು. ಓದು ಬಿಟ್ಟು ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಅಣ್ಣನ ಮಗ ಗಾಂಜಾಗೆ ದಾಸನಾಗಿದ್ದ, ಕಳೆದ ಒಂದು ತಿಂಗಳ ಹಿಂದಷ್ಟೆ ತನ್ನ ತಂದೆಯನ್ನ ಕಳೆದುಕೊಂಡಿದ್ದ. ಬಳಿಕ ತಂದೆ ಸಮಾನರಾಗಿದ್ದ ಚಿಕ್ಕಪ್ಪನೊಂದಿಗೆ ಹಗಲಿನಲ್ಲಿ ಸ್ನೇಹಿತರಂತೆ ಇರುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ದಾಯಾದಿಗಳಾಗಿ ಕಿತ್ತಾಡಿಕೊಳ್ಳುತ್ತಿದ್ದರು.
ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಗ್ರಾಮದಲ್ಲಿ ಗಾಂಜಾ ಅಮಲು ಜೋರಾಗಿದ್ದು, ಆರೋಪಿ ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದೆ. ಇದೆಲ್ಲ ಕಾರಣಗಳಿಂದ ಅಪ್ರಾಪ್ತನೊರ್ವ ಗಾಂಜಾಗೆ ದಾಸನಾಗಿ ಕೊಲೆ ಹಂತಕ್ಕೆ ತಲುಪಿದ್ದು, ಈ ಸಂಬಂಧ ಮಾಲೂರು ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.