ಬೆಂಗಳೂರು: ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾದ ಪರಿಣಾಮ ಈ ಬಾರಿ ಗವಿಗಂಗಾಧರನಿಗೆ ಸೂರ್ಯ ರಶ್ಮಿಯ ಅಭಿಷೇಕ ಇಲ್ಲ.
ಸಂಕ್ರಾಂತಿ ಸಡಗರದ ನಡುವೆ ಸೂರ್ಯ ತನ್ನ ಪಥ ಬದಲಾವಣೆಗಾಗಿ ಪ್ರತಿ ವರ್ಷ ಭಾಸ್ಕರನ ಅನುಮತಿಯನ್ನ ಇಂದು ಪಡೆಯುತ್ತಾನೆ ಎಂಬ ನಂಬಿಕೆ ಇದೆ. ನಗರದ ಐತಿಹಾಸಿಕ ದೇವಾಲಯ ಗವಿಗಂಗಾಧರೇಶ್ವರನ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಮೋಡ ಅಡ್ಡವಾದ ಪರಿಣಾಮ ಸೂರ್ಯ ತನ್ನ ಪಥ ಬದಲಿಸಿದ್ದಾನೆ.
ಇಂದು 5.25 ರಿಂದ 5.27 ಕ್ಕೆ ಸೂರ್ಯ ರಶ್ಮಿ ಸ್ಪರ್ಶವಾಗಬೇಕಿತ್ತು. ಗವಿಗಂಗಾಧರನನ್ನು ಸ್ಪರ್ಶಿಸದೆ ಭಾಸ್ಕರ ತನ್ನ ಪಥ ಬದಲಿಸಿದ್ದಾನೆ. ಮೋಡ ಅಡ್ಡ ಬಂದ ಪರಿಣಾಮ ಸೂರ್ಯ ರಶ್ಮಿಯ ಸ್ಪರ್ಶ ಅಗೋಚರವಾಗಿದೆ. ಈ ಹಿನ್ನೆಲೆಯಲ್ಲಿ ಅಗೋಚರವಾಗಿಯೇ ಗವಿ ಗಂಗಾಧರನನ್ನು ಸ್ಪರ್ಶಿಸಿ ಸೂರ್ಯ ಮುಂದೆ ಹೋಗಿದ್ದಾನೆ.
ಗವಿಗಂಗಾಧರ ಸನ್ನಿಧಿಯಲ್ಲಿ ಬೆಳಗ್ಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಇಂದು ಮುಂಜಾನೆಯಿಂದಲೇ ದೇವಾಲಯದಲ್ಲಿ ಶಿವನಿಗೆ ರುದ್ರಾಭಿಷೇಕ ಸೇರಿ ವಿಶೇಷ ಪೂಜಾ ಕೈಂಕರ್ಯ ಜರುಗಿತ್ತು. ಸಂಜೆಯ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಭಕ್ತಾದಿಗಳಿಗೆ ದೇವಸ್ಥಾನದ ಆವರಣದಲ್ಲಿ ಪೆಂಡಲ್ ಹಾಕಿ ಎಲ್ಇಡಿ ಟಿವಿ ಅಳವಡಿಸಲಾಗಿತ್ತು.
ಒಂದು ವೇಳೆ ಭಕ್ತಾದಿಗಳು ಸಹಕರಿಸದಿದ್ದರೆ ದೇವಸ್ಥಾನ ಕ್ಲೋಸ್ ಮಾಡ್ತೇವೆ. ಭಕ್ತಾದಿಗಳಿಗೆ ಒಳಗಡೆ ಬಿಡಬೇಡಿ ಅಂತ ಸರ್ಕಾರ ಈಗಾಗಲೇ ಹೇಳಿದೆ. ನೂಕು ನುಗ್ಗಲು ಆಗುತ್ತೆ. ಕೊರೊನಾ ಪರಿಸ್ಥಿತಿಗೆ ಅನುಗುಣವಾಗಿ ಈ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ಭಕ್ತಾದಿಗಳು ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಂಡು ಬಂದರೆ ಮೂಲಮೂರ್ತಿಯ ದರ್ಶನಕ್ಕೆ ಅವಕಾಶ ಮಾಡಿಕೊಡ್ತೇವೆ ಅಂತ ದೇವಾಲಯದ ಪ್ರಧಾನ ಅರ್ಚಕರಾದ ಸೋಮಸುಂದರ್ ಹೇಳಿದ್ದರು.