ದಾವಣಗೆರೆ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಶಿಕ್ಷೆ ಆಗಲೇಬೇಕು ಎಂದು ಇದೂವರೆಗೂ ಯಾವೊಬ್ಬ ಕಾಂಗ್ರೆಸ್ ನಾಯಕರೂ ಹೇಳಿಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.
ದಾವಣಗೆರೆಯ ಕತ್ತಲಗೆರೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿಗಳನ್ನು ಮುಲಾಜಿಲ್ಲದೆ ನಿಷೇಧ ಮಾಡಬೇಕು. ಈ ಪ್ರಕರಣದ ಹಿಂದೆ ಬಹುದೊಡ್ಡ ರಾಜಕೀಯ ಪಿತೂರಿ ಇದೆ. ಸ್ವ-ಪಕ್ಷದ ದಲಿತ ಶಾಸಕನ ರಕ್ಷಣೆಗೆ ಕಾಂಗ್ರೆಸ್ ನಾಯಕರು ನಿಲ್ಲುತ್ತಿಲ್ಲ. ಕಾಂಗ್ರೆಸ್ ನಾಯಕರಿಗೆ ತಮ್ಮ ಶಾಸಕರನ್ನು ಕಾಪಾಡಿಕೊಳ್ಳಲು ಆಗಿಲ್ಲ. ಆರೋಪಿಗಳನ್ನು ಅಮಾಯಕರು ಎಂಬ ಹೇಳಿಕೆ ನೀಡುತ್ತಿದ್ದಾರೆ ಎಂದು ಗರಂ ಆದರು.
ಠಾಣೆಗೆ ಶಾಸಕರ ಮನೆಗೆ ಬೆಂಕಿಬಿಟ್ಟವರು ಅಮಾಯಕರಾ?, ಅಖಂಡ ಶ್ರೀನಿವಾಸರ ಮನೆ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ ಸಂಚು ಆಗಿದೆ. ಇದು ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದುವರೆಗೂ ಗಲಭೆ ಮಾಡಿದವರಿಗೆ ಶಿಕ್ಷೆಯಾಗಲೇ ಬೇಕು ಎಂದು ಯಾವೊಬ್ಬ ಕಾಂಗ್ರೆಸ್ ನಾಯಕರು ಕೂಡ ಹೇಳಿಲ್ಲ ಎಂದರು.
ಈ ಗಲಭೆ ಹಿಂದಿರುವ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಬೇಕು. ಸಂಘಟನೆಗಳ ನಿಷೇಧದ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸರ್ಕಾರ ಸುಭದ್ರವಾಗಿದೆ. ದುಷ್ಟಶಕ್ತಿಗಳನ್ಮು ಸರ್ಕಾರ ಹೆಡೆಮುರಿ ಕಟ್ಟುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಯೂರಿಯಾ ಗೊಬ್ಬರ ಕೊರತೆಗೆ ಪ್ರತಿಕ್ರಿಯಿಸಿದ ಅವರು, ಯೂರಿಯಾ ಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ. ರಾಜ್ಯಕ್ಕೆ 27 ಸಾವಿರ ಟನ್ ಯೂರಿಯಾ ಗೊಬ್ಬರ ಬಂದಿದೆ. ಶಿವಮೊಗ್ಗ-ದಾವಣಗೆರೆ ಭಾಗಕ್ಕೆ 2007 ಟನ್ ಯೂರಿಯಾ ಬೇಕಿದೆ. ರೈತರಿಗೆ ಯೂರಿಯಾ ಗೊಬ್ಬರ ಕೊರತೆ ಆಗಲ್ಲ. ಮೂರ್ನಾಲ್ಕು ದಿನದಲ್ಲಿಯೇ ಯೂರಿಯಾ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದರು.