ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಸಂಬಂಧ ಮಹತ್ವದ ಸ್ಫೋಟಕ ಮಾಹಿತಿ ಲಭ್ಯ ಆಗಿದೆ. ಮೂಲಗಳ ಪ್ರಕಾರ ಗಲಭೆ ಕೇಸ್ನಲ್ಲಿ ಅರೆಸ್ಟ್ ಆದವರಿಗೆ ಭಯೋತ್ಪಾದಕ ಸಂಘಟನೆಗಳ ಜೊತೆಗೆ ನಂಟಿದೆ ಎಂಬ ಸುಳಿವು ಸಿಕ್ಕಿದೆ.
ಗಲಭೆ ಪ್ರಕರಣದಲ್ಲಿ ಬಂಧಿಸಲಾಗಿರುವ 40ಕ್ಕೂ ಹೆಚ್ಚು ಆರೋಪಿಗಳಿಗೆ ಭಯೋತ್ಪಾದನೆ ಚಟುವಟಿಕೆಗಳ ಲಿಂಕ್ ಇದೆ ಎಂದು ಸಿಸಿಬಿಯ ಟೆಕ್ನಿಕಲ್ ತನಿಖೆಯಲ್ಲಿ ಸತ್ಯ ಬಯಲಾಗಿದೆ. ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿ ಎದುರು ನಡೆದಿದ್ದ ಬಾಂಬ್ ಸ್ಫೋಟ, ಚರ್ಚ್ ಸ್ಟ್ರೀಟ್ನಲ್ಲಿ ನಡೆದಿದ್ದ ಸ್ಫೋಟ ಮತ್ತು ಆರ್ಎಸ್ಎಸ್ ಮುಖಂಡ ರುದ್ರೇಶ್ ಹತ್ಯೆಯಲ್ಲಿ ಭಾಗಿ ಆಗಿರುವ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದರು ಎಂಬ ಸಾಕ್ಷ್ಯ ಸಿಕ್ಕಿದೆ.
ಇತ್ತೀಚೆಗಷ್ಟೆ ಸಿಸಿಬಿ ಪೊಲೀಸರು ಸಮಿಯುದ್ದೀನ್ನನ್ನ ಅರೆಸ್ಟ್ ಮಾಡಿದ್ದಾರೆ. ಈತ ಜೈಲಿನಲ್ಲಿ ರುದ್ರೇಶ್ ಹತ್ಯೆ ಆರೋಪಿಗಳನ್ನ ಭೇಟಿಯಾಗಿದ್ದನು. ಈತನಿಗೆ ಬಾಂಗ್ಲಾದೇಶದ ನಿಷೇಧಿತ ಉಗ್ರ ಸಂಘಟನೆ ಅಲ್ ಹಿಂದ್ ಜೊತೆಗೆ ನಂಟಿತ್ತು. ಬಿಜೆಪಿ ಕಚೇರಿ ಎದುರು ಇಂಡಿಯನ್ ಮುಜಾಹಿದ್ದೀನ್ ಜೊತೆ ಸೇರಿಕೊಂಡು ಅಲ್ ಉಮಾ ಸಂಘಟನೆ ಬಾಂಬ್ ಸ್ಫೋಟಿಸಿತ್ತು.
ಇದಲ್ಲದೆ ವಿಸಿಟರ್ ನೆಪದಲ್ಲಿ ಕೆಲ ಗಲಭೆಕೋರರು ಜೈಲಿನಲ್ಲಿರುವ ವಿವಿಧ ಉಗ್ರರರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಗಲಭೆ ವೇಳೆಯ ಕೆಲ ಆರೋಪಿಗಳ ವಿಡಿಯೋಗಳು ಮತ್ತು ಜೈಲಿನಲ್ಲಿ ಆರೋಪಿಗಳನ್ನು ಭೇಟಿ ಮಾಡೋಕೆ ಹೋದ ವೇಳೆ ಅಲ್ಲಿನ ಸಿಸಿಟಿವಿಯ ದೃಶ್ಯಗಳು ಹೋಲಿಕೆಯಾಗಿವೆ. ಗಲಭೆಯಲ್ಲಿ ಬಂಧಿತರಾಗಿರುವ ಆರೋಪಿಗಳ ಕಾಲ್ ರೆಕಾರ್ಡ್ಸ್ ಮಾಹಿತಿ ಕೆದಕಿರುವ ಪೊಲೀಸರಿಗೆ ಉಗ್ರರ ನಂಟಿನ ಸುಳಿವು ಸಿಕ್ಕಿದೆ.