ತುಮಕೂರು: ಗಲಭೆಕೋರರಿಂದಲೇ ಆಸ್ತಿ ನಷ್ಟ ವಸೂಲಿ ಮಾಡಬೇಕು ಎಂಬ ಕಾನೂನನ್ನು ಕೇಂದ್ರ ಸರ್ಕಾರ ತಂದಿದೆ. ಆದರೆ ಕರ್ನಾಟಕದಲ್ಲಿ ಅದು ಜಾರಿ ಆಗಿರಲಿಲ್ಲ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಸ್ತಿ ಮುಟ್ಟುಗೋಲು ಆಗುವಂತಹ ಪ್ರಕರಣಗಳು ಇನ್ನೂ ಆಗಿರಲಿಲ್ಲ. ಹೀಗಾಗಿ ಆ ಕಾನೂನು ರಾಜ್ಯದಲ್ಲಿ ಇನ್ನೂ ಜಾರಿ ಆಗಿರಲಿಲ್ಲ. ಡಿಜೆ ಹಳ್ಳಿ ಪ್ರಕರಣದಲ್ಲಿ ಗಲಭೆಕೋರರಿಂದ ಆಸ್ತಿ ನಷ್ಟ ವಸೂಲಿ ಮಾಡುವ ಬಗ್ಗೆ ಸಿಎಂ ಬಳಿ ಚರ್ಚಿಸಬೇಕಾಗಿದೆ. ಸಿಎಂ ಕ್ವಾರಂಟೆನ್ ನಲ್ಲಿದ್ದಾರೆ. ಅವರ ಕ್ವಾರಂಟೈನ್ ಅವಧಿ ಮುಗಿದ ಬಳಿಕ ಸಭೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಎಸ್ಡಿಪಿಐ, ಪಿಎಫ್ಐ ಸಂಘಟನೆಗಳ ನಿಷೇಧದ ಕುರಿತು ಮಾತನಾಡಿದ ಅವರು, ಕಾನೂನಿನ ಕ್ರಮ ಏನಿದೆಯೋ ಅದನ್ನು ಖಂಡಿತ ಜಾರಿ ಮಾಡುತ್ತೇವೆ. ಆದರೆ ತನಿಖಾ ವರದಿ ಬರದೇ ಪ್ರತಿಕ್ರಿಯಸಲು ಸಾಧ್ಯವಿಲ್ಲ. ಮೂರು ಸಾವಿರ ಜನ ಸೇರ್ತಾರೆ ಅಂದ್ರೆ ಪ್ರಚೋದನೆ ಇಲ್ಲದೆ, ಪ್ಲಾನ್ ಇಲ್ಲದೆ, ಸಂಘಟನೆ ಇಲ್ಲದೆ ಮಾಡಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.