ಹೈದರಾಬಾದ್: ಹೆರಿಗೆ ನೋವಿನಿಂದ ಬಳಲುತ್ತಿರುವ ಗರ್ಭಿಣಿಯನ್ನು 7 ಕಿಲೋ ಮೀಟರ್ ವೆರೆಗೆ ಸ್ವಯಂ ಸೇವಕರು ಹೊತ್ತುಕೊಂಡು ಹೋಗಿ, ಅಂಬುಲೆನ್ಸ್ ಗೆ ತಲುಪಿಸಿರುವ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯ ಬೊಂಡಪಲ್ಲಿ ಪ್ರದೇಶದಲ್ಲಿ ನಡೆದಿದೆ.
ಬುಡಕಟ್ಟು ಸಮುದಾಯದ ತುಂಬು ಗರ್ಭಿಣಿಯೊಬ್ಬರಿಗೆ ನಿನ್ನೆ ಸಂಜೆ ಸುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಮಹಿಳೆಯ ಪತಿ ಕಾಮೇಶ್ 108 ಗೆ ಕರೆಮಾಡಿದ್ದಾರೆ. ಆದರೆ ಇವರು ಇರುವಲ್ಲಿಗೆ ಅಂಬುಲೆನ್ಸ್ ಬರಲು ಸರಿಯಾದ ಮಾರ್ಗ ಇರಲಿಲ್ಲ. ನಂತರ ಪಂಚಾಯತ್ ಕಾರ್ಯದರ್ಶಿ ಗಾಂಧವಪುರ ಕೃಷ್ಣ ಎಂಬವರು ತಕ್ಷಣವೇ ದ್ವಿಚಕ್ರವಾಹನವನ್ನು ಗ್ರಾಮಕ್ಕೆ ಕಳುಹಿಸಿದ್ದಾರೆ. ಆದರೆ ಮಹಿಳೆಗೆ ಕುಳಿತುಕೊಳ್ಳಲು ಸಾಧ್ಯವಾಗಿಲ್ಲ.
ಗೊಲ್ಲಪಲೆಂ ಗ್ರಾಮದಲ್ಲಿರುವ ಸ್ವಯಂ ಸೇವಕರಾದ ಶ್ರೀಹರ್ಷ ಮತ್ತು ಬಾಲಾಜಿ ಜೋಳಿಗೆಯಲ್ಲಿ ಮಹಿಳೆಯನ್ನು ಕರೆದುಕೊಂಡು ಹೋಗಲು ಸಹಾಯ ಮಾಡಿದ್ದಾರೆ. ಈ ಇಬ್ಬರು ಸ್ವಯಂ ಸೇವಕರು ಮಹಿಳೆಯನ್ನು ಹೊತ್ತುಕೊಂಡು ಅಂಬುಲೆನ್ಸ್ ಇರುವಲ್ಲಿಗೆ ಸಾಗಿಸಿದ್ದಾರೆ. ಅಲ್ಲಿಂದ 108 ವಾಹನದಲ್ಲಿ ಕರೆದುಕೊಂಡು ಹೋಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.