– 4,950 ಕೇಸ್ ಇತ್ಯರ್ಥ
ಗದಗ: ಜಿಲ್ಲೆಯಲ್ಲಿ ಭಾನುವಾರ ನಡೆದ ಮೆಗಾ ಲೋಕ ಅದಾಲತ್ನಲ್ಲಿ 4,950 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡವು. ಈ ಬಾರಿಯ ಅದಾಲತ್ಗೆ 6,124 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು.
39 ಮೋಟಾರು ಅಪಘಾತ ಪ್ರಕರಣಗಳು, 123 ಚೆಕ್ಬೌನ್ಸ್, 72 ಕ್ರಿಮಿನಲ್ ಕಂಪೌಂಡೆಬಲ್ ಪ್ರಕರಣಗಳು, 257 ಅಸಲು ದಾವೆ, 24 ಭೂಸ್ವಾಧೀನ ದರಖಾಸ್ತು, 4,230 ಇತರೆ ಕ್ರಿಮಿನಲ್, 58 ಎಂಎಂಆರ್ಡಿ, 5 ವೈವಾಹಿಕ ಪ್ರಕರಣಗಳು, 14 ವಿದ್ಯುಚ್ಛಕ್ತಿ ಪ್ರಕರಣಗಳು, 1 ಕಾರ್ಮಿಕ ಪ್ರಕರಣ, ಎರಡು ಹಣ ವಸೂಲಾತಿ ಪ್ರಕರಣಗಳನ್ನು ಸೇರಿಸಿ ಒಟ್ಟು 4,823 ಚಾಲ್ತಿ ಪ್ರಕರಣಗಳನ್ನು 9,79,71,050 ಪರಿಹಾರ ಒದಗಿಸುವುದರ ಮೂಲಕ ರಾಜಿ ಸಂಧಾನ ಮಾಡಲಾಯಿತು. ಅದೇ ರೀತಿ, 127 ಬ್ಯಾಂಕ್ ಪ್ರಕರಣಗಳ ವ್ಯಾಜ್ಯಪೂರ್ವ ಪ್ರಕರಣಗಳನ್ನು 1,40,38,435 ರಾಜಿ ಸಂಧಾನ ಮಾಡಲಾಯಿತು. ಹೀಗೆ ಒಟ್ಟು 4,950 ಪ್ರಕರಣಗಳನ್ನು 11,20,09,485 ರೂ.ಗೆ ರಾಜಿ ಸಂಧಾನಗೊಳಿಸಲಾಯಿತು.
ಸಾವಿರಾರು ಜನರ ಮಧ್ಯೆ ಅಗ್ನಿ ಸಾಕ್ಷಿಯಾಗಿ, ಸಪ್ತಪದಿ ತುಳಿದು ತಾಳಿಕಟ್ಟಿ ಜೀವನ ನಡೆಸುತ್ತಿದ್ದ ಜೋಡಿಗಳು ದೂರವಾಗಿದ್ದರು. ವಿರಹ ವೇದನೆಯಿಂದ ನಾನೊಂದು ತೀರ, ನೀನೊಂದು ತೀರ ಅಂತಿದ್ದ ಜೋಡಿಗಳು ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಈಗ ಕೋರ್ಟ್ನಲ್ಲಿ ತಿಳುವಳಿಕೆ ಹೇಳಿ ರಾಜಿ ಮಾಡಿಸಿರುವುದರಿಂದ ಗದಗ ಜಿಲ್ಲೆಯ 5 ಜೋಡಿಗಳು ಮತ್ತೆ ಒಂದಾಗಿದ್ದಾರೆ. ಅವರಿಗೆ ಒಬ್ಬರಿಗೊಬ್ಬರು ಹಾರ ಬದಲಾಯಿಸಿ, ಸಿಹಿ ತಿನಿಸಿದರು. ನೆರೆದ ನ್ಯಾಯಾಧೀಶರು, ವಕೀಲರು, ಸಿಬ್ಬಂದಿ, ಸಂಬಂಧಿ ಎಲ್ಲರೂ ಪುಷ್ಪ ಎರಚುವ ಮೂಲಕ ಶುಭ ಹಾರೈಸಿದರು. ಜೋಡಿಗಳ ಮತ್ತೆ ನಗುವಿನ ಚೆಲುವು ಚಿಮ್ಮಿ ಒಂದಾದರು.
ಮೆಗಾ ಲೋಕ್ ಅದಾಲತ್ನಲ್ಲಿ ಪ್ರಧಾನ ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಲಯ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಸ್.ಮಹಾಲಕ್ಷ್ಮೀ ನೇರಳೆ, ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಬಿ.ಮಧುಸೂದನ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ನರಶಿಂಸಾ ಎಂ.ವಿ, ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕಣ್ಣವರ, ಜೆಎಂಎಫ್ಸಿ ನ್ಯಾಯಾಧೀಶರಾದ ಎಸ್.ಚಿನ್ನಸ್ವಾಮಿ, ಶ್ರೀಕಾಂತ ರವೀಂದ್ರಪ್ಪ, ಅರುಣ ಚೌಗಲೆ, ನಿಖಿತಾ ಎಸ್. ಅಕ್ಕಿ ಹಾಗೂ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಎ.ಮೌಲ್ವಿ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಮತ್ತೂರ, ಉಪಾಧ್ಯಕ್ಷ ವಿ.ವಿ.ಪಾಟೀಲ್, ಜಂಟಿ ಕಾರ್ಯದರ್ಶಿ ಕುಮಾರ್ ಜಿ.ವಿ. ಹಾಗೂ ವಕೀಲರ ವೃಂದದವರು, ಸಂಧಾನಕಾರ ವಕೀಲರು, ಪಕ್ಷಗಾರರು ಉಪಸ್ಥಿತರಿದ್ದರು. ಎಲ್ಲ ತಾಲೂಕುಗಳ ನ್ಯಾಯಾಧೀಶರು ಹಾಗೂ ವಕೀಲ ವೃಂದದವರು ಕೂಡ ಆಯಾ ತಾಲೂಕು ನ್ಯಾಯಾಲಯಗಳಲ್ಲಿ ನಡೆದ ಲೋಕ್ ಅದಾಲತ್ದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ:ಬೆಂಗಳೂರಿನ ಹಂಪಿನಗರ ಮನೆಯಲ್ಲಿ ನಿಗೂಢ ಸ್ಫೋಟ